ಕಡಬ: ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕೇಪು ಲಕ್ಷ್ಮಿ ಜನಾರ್ಧನ ದೇವಸ್ಥಾನದ ಬಳಿ ಘಟನೆ ನಡೆದಿದೆ.
ಬೆಂಗಳೂರಿನ ದಾಸರಹಳ್ಳಿಯ ನಾಗರತ್ನಮ್ಮ( 58) ಮೃತಪಟ್ಟವರು.ಬೆಂಗಳೂರಿನಿಂದ ತಮ್ಮ ಕುಟುಂಬಸ್ಥರೊಂದಿಗೆ ನಾಗರತ್ನಮ್ಮಬೆಂಗಳೂರಿನಿಂದ ರೈಲು ಮೂಲಕ ಬಂದು ನೆಟ್ಟಣದಲ್ಲಿ ಬಂದಿಳಿದಿದ್ದರು. ಬಳಿಕ ಅಲ್ಲಿಂದ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಧರ್ಮಸ್ಥಳಕ್ಕೆ ತೆರಳಲು ಬಸ್ ಹತ್ತಿದ್ದರು. ಬಸ್ ಮುಂಭಾಗ ಕುಳಿತ್ತಿದ್ದ ಅವರು ಕೇಪು ದೇವಸ್ಥಾನಕ್ಕೆ ತಲುಪುತ್ತಿದ್ದಂತೆ ಬ್ಯಾಗ್ ತೆಗೆದುಕೊಳ್ಳಲು ಹಿಂಬದಿಗೆ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ತಿರುವು ರಸ್ತೆಯಲ್ಲಿ ಬಸ್ ನ ಹಿಂಬದಿ ಬಾಗಿಲು ಹಾಕದ ಕಾರಣ ಏಕಾಏಕಿ ಮಹಿಳೆ ಬಸ್ ನಿಂದ ಹೊರಗೆ ಎಸೆಯಲ್ಪಟ್ಟು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕಡಬ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.