ಬೆಳ್ತಂಗಡಿ: ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ಬದ್ಯಾರ್ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಬದ್ಯಾರ್ ಖಾಸಗಿ ಆಸ್ಪತ್ರೆಯಲ್ಲಿ ಲಾಯಿಲ ಗ್ರಾಮದ ಗಾಂಧಿನಗರ ನಿವಾಸಿ ಗಾಯತ್ರಿ(26) ಎಂಬವರು ಎರಡನೇ ಹೆರಿಗೆಗಾಗಿ ಎ.3 ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎ.4 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಆದರೆ ಹೆರಿಗೆ ನಂತರ ವಿಪರೀತ ರಕ್ತ ಸ್ರಾವ ಉಂಟಾಗಿದ್ದು ರಾತ್ರಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದು ಇದರಿಂದ ಕುಟುಂಬಸ್ಥರು ಆಕ್ರೋಶಗೊಂಡರಲ್ಲದೇ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.ಅದಲ್ಲದೇ 10,000 ರೂ ಕಟ್ಟಿದ ಮುಂಗಡ ಹಣವನ್ನೂ ಹಿಂತಿರುಗಿಸುತ್ತೇವೆ ಎಂಬ ಬಗ್ಗೆಯೂ ವೈದ್ಯರು ತಿಳಿಸಿದ್ದರು . ಒಂದು ವೇಳೆ ವೈದ್ಯರ ನಿರ್ಲಕ್ಷ್ಯ ಇಲ್ಲದಿದ್ದರೆ ಆಸ್ಪತ್ರೆಯವರಿಗೆ ಹಿಂಜರಿಕೆ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ದೂರು ಕೂಡ ದಾಖಲಾಗಿಲ್ಲ ಎಂಬ ಬಗ್ಗೆಯೂ ಜನರು ಮಾತನಾಡಿಕೊಳ್ಳುತ್ತಿದ್ದಾರೆ.ಮೃತ ಮಹಿಳೆಗೆ 3 ವರ್ಷದ ಹೆಣ್ಣು ಮಗುವೊಂದಿದ್ದು ಇದೀಗ ಹಸುಗೂಸು ಸೇರಿದಂತೆ ಇಬ್ಬರು ಪುಟ್ಟ ಮಕ್ಕಳಿಗೆ ತಾಯಿ ಇಲ್ಲವಾಗಿದೆ. ಈ ಬದ್ಯಾರ್ ಖಾಸಗಿ ಆಸ್ಪತ್ರೆಯ ಬಗ್ಗೆ ಹಲವು ಆರೋಪಗಳು ಈ ಹಿಂದೆಯಿಂದಲೂ ಕೇಳಿ ಬರುತ್ತಿದೆ.