ಸುಳ್ಯ: ಸುಳ್ಯ ; ದನದ ಕೆಚ್ಚಲಿನಿಂದ ಕದ್ದು ಹಾಲು ಕರೆಯುತ್ತಿದ್ದಾಗ ಕೆಲಸದ ಮಹಿಳೆ ಸಿಕ್ಕಿ ಬಿದ್ದ ಘಟನೆ ಪಂಜ ಸಮೀಪದ ಕರಿಕ್ಕಳದಲ್ಲಿ ನಡೆದಿದೆ.
ಕರಿಕ್ಕಳದ ಮನೆಯೊಂದರಲ್ಲಿ ಮಹಿಳೆಯೊಬ್ಬರು ಹಲವು ವರ್ಷಗಳಿಂದ ಹಾಲು ಕರೆಯುವ ಕೆಲಸದಲ್ಲಿದ್ದು ಅವರೇ ಡೈರಿಗೆ ಹಾಲು ಕೊಂಡೊಯ್ಯುತ್ತಿದ್ದರು.
ಇತ್ತೀಚೆಗೆ ಆ ಮಹಿಳೆ 4-5 ದಿವಸ ರಜೆ ಮಾಡಿದ್ದರು. ಹಾಗಾಗಿ ಮನೆಯವರು ಹಾಲು ಕರೆಯಲು ಬೇರೆ ಒಬ್ಬರನ್ನು ನೇಮಿಸಿದ್ದರು. ಆದರೆ ಹೊಸದಾಗಿ ನೇಮಕಗೊಂಡ ಹಾಲು ಕರೆಯುವವರಿಗೆ ಮಾಮೂಲಿನಷ್ಟು ಹಾಲು ಸಿಗುತ್ತಿರಲಿಲ್ಲ. ಅವರು ದನದ ಕೆಚ್ಚಲು ಮಾಮೂಲಿನಂತೆ ಇಲ್ಲ. ಯಾರೋ ಹಾಲು ಕರೆಯುತ್ತಿದ್ದಾರೆ ಅಂತಾ ದನದ ಮಾಲೀಕರಿಗೆ ಹೇಳಿದ್ದಾರೆ. ಇದನ್ನು ಆಧರಿಸಿ ಮನೆಯವರು ಹಟ್ಟಿಗೆ ಅಳವಡಿಸಿದ್ದ ಸಿ.ಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಬೆಳಗ್ಗಿನ ಜಾವ 4 ರಿಂದ 5 ಗಂಟೆ ವೇಳೆಗೆ ಮಹಿಳೆಯೊಬ್ಬರು ಬಂದು ದನದ ಕೆಚ್ಚಲಿನಿಂದ ಅರ್ಧ ಹಾಲು ಕರೆದು ಹೋಗುತ್ತಿರುವ ದೃಶ್ಯ ಕಂಡುಬಂದಿದೆ. ಬಳಿಕ ಮಾಲೀಕರು ಸುಬ್ರಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.