ಬೆಂಗಳೂರು: ರಾಜ್ಯದ ನೀರಾವರಿ ಸಮಸ್ಯೆಗಳ ವಿಚಾರವಾಗಿ ಜೆಡಿಎಸ್ ಪಕ್ಷ ಕೈಗೊಳ್ಳಲಿರುವ ಜನತಾ ಜಲಧಾರೆ ಗಂಗಾ ರಥಯಾತ್ರೆಯ ಪೂರ್ವಸಿದ್ಧತೆ ಕುರಿತು ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮುಖಂಡರ ಜತೆ ಬೆಂಗಳೂರಿನಲ್ಲಿ ಮಾತುಕತೆ ನಡೆಸಿದರು.
ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.
ರಾಜ್ಯದ ಹದಿನೈದು ಪವಿತ್ರ ತಾಣಗಳಲ್ಲಿ ಜಲ ಸಂಗ್ರಹಣೆ ಮಾಡುವ ಈ ಗಂಗಾ ರಥಯಾತ್ರೆಯ ರೂಪುರೇಷೆ, ರೀತಿ ರಿವಾಜು, ಯಾತ್ರೆ ಸಾಗುವ ಹಾದಿ, ಗಂಗಾಪೂಜೆ, ಮೆರವಣಿಗೆ ಇತ್ಯಾದಿ ಅಂಶಗಳ ಬಗ್ಗೆ ಕರಾವಳಿ ಜಿಲ್ಲೆಗಳ ಮುಖಂಡರ ಜತೆ ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ.
ಜಲಧಾರೆ ಕಾರ್ಯಕ್ರಮವನ್ನು ಪಕ್ಷವೂ ಅತ್ಯಂತ ಶ್ರದ್ಧೆಯಿಂದ ಹಮ್ಮಿಕೊಂಡಿದ್ದು, ಅದನ್ನು ಎಲ್ಲ ಮುಖಂಡರು, ಕಾರ್ಯಕರ್ತರು ಒಟ್ಟಾಗಿ ಯಶಸ್ವಿಗೊಳಿಸಬೇಕು ಎಂದು ಕುಮಾರಸ್ವಾಮಿ ಮುಖಂಡರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಗಣಪೇ ಗೌಡ, ಜಾಕೆ ಮಾಧವ ಗೌಡ, ಸುಮತಿ ಹೆಗ್ಗಡೆ, ಮೊಹಮದ್ ಅಲ್ತಾಫ್, ದಿನಕರ್ ಉಳ್ಳಾಲ್, ಜಾಫರ್ ಸುಳ್ಯ ಮುಂತಾದವರು ಹಾಜರಿದ್ದರು.