ಉಪ್ಪಿನಂಗಡಿ: ಬಸ್ ಓಡಿಸುತ್ತಿದ್ದಾಗಲೇ ಕೆಎಸ್ ಆರ್ ಟಿಸಿ ಬಸ್ ಚಾಲಕನಿಗೆ ಎದೆನೋವು ಕಾಣಿಸಿಕೊಂಡ ಪರಿಣಾಮ ತಾನೇ ಬಸ್ ಚಲಾಯಿಸಿ ಡ್ರೈವರ್ ನ್ನು ಕಂಡೆಕ್ಟರ್ ಆಸ್ಪತ್ರೆಗೆ ದಾಖಲಿಸಿದ ಘಟನೆ ಕಡಬ ತಾಲೂಕಿನ ಆತೂರಿನಲ್ಲಿ ನಡೆದಿದೆ.
ಮಂಗಳೂರು ಡಿಪೋಗೆ ಸೇರಿದ ಕೆಎಸ್ಸಾರ್ಟಿಸಿ ಬಸ್ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಸಂಚರಿಸುತ್ತಿತ್ತು. ಬಸ್ ಅನ್ನು ಚಾಲಕ ಗಣಪತಿ ಚಲಾಯಸುತ್ತಿದ್ದರು. ಬಸ್ ಕಡಬ ತಾಲೂಕಿನ ಆತೂರಿಗೆ ಬರುತ್ತಿದ್ದಂತೆ ಗಣಪತಿ ಅವರು ಚಾಲನೆಯ ವೇಗ ಕಡಿಮೆಮಾಡಿದ್ದಾರೆ. ಸಂದೇಹಗೊಂಡ ಬಸ್ ನಿರ್ವಾಹಕ, ಚಾಲಕನ ಹತ್ತಿರ ಬಂದು ಮಾತನಾಡಲು ಪ್ರಯತ್ನಿಸುವಾಗ ಗಣಪತಿ ಅವರಿಗೆ ಎದೆನೋವು ಕಾಣಿಸಿಕೊಂಡಿರುವುದು ಗೊತ್ತಾಗಿದೆ. ಕೆಲ ಕ್ಷಣಗಳಲ್ಲಿಯೇ ಬಸ್ನ ಚಾಲಕ ಮಾತನಾಡದಂತಹ ಸ್ಥಿತಿಗೆ ತಲುಪಿದ್ದಾರೆ. ಕೂಡಲೇ ಅವರನ್ನು ಬಸ್ ನಿಲ್ಲಿಸಲು ತಿಳಿಸಿದ್ದಲ್ಲದೇ, ಅವರನ್ನು ಬಸ್ನ ಸೀಟ್ನಲ್ಲಿ ಮಲಗಿಸಿ ನಿರ್ವಾಹಕ ತಾನೇ ಬಸ್ ಅನ್ನು ಚಲಾಯಿಸಿಕೊಂಡು ಬಂದು ಸುಮಾರು ಏಳು ಕಿ.ಮೀ. ದೂರವಿರುವ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ತಲುಪಿಸಿದ್ದಾರೆ. ಅಲ್ಲಿಂದ ಹತ್ತಿರವಿರುವ ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಬಳಿಕ ಅವರನ್ನು ಆಂಬ್ಯುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಸ್ನಲ್ಲಿ ಸುಮಾರು 30ರಷ್ಟು ಪ್ರಯಾಣಿಕರಿದ್ದರು. ನಿರ್ವಾಹಕನ ಸಮಯಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


