ಬಾಗಲಕೋಟೆ: ಪಠ್ಯಪುಸ್ತಕದಲ್ಲಿ ಹೆಡ್ಗೇವಾರ್ ಭಾಷಣ ಸೇರಿದ್ದಕ್ಕೆ ವಿರೋಧದ ವಿಚಾರವಾಗಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಯಾರು ಈ ದೇಶವನ್ನ ಹಾಳು ಮಾಡಿದರೋ ಅವರದೇ ಪಠ್ಯ ಇರಬೇಕೆನ್ನೋದು ವಿಪಕ್ಷಗಳ ಆಸೆಯಾಗಿದೆ ಎಂದು ಹೇಳಿದ್ದಾರೆ…
ಮಾಧ್ಯದೊಂದಿಗೆ ಮಾತನಾಡಿದ ಈಶ್ವರಪ್ಪ, ದೇಶದ ಸಂಸ್ಕೃತಿ ವಿಚಾರದಲ್ಲಿ ಹೆಡ್ಗೇವಾರ್ ಮಾಡಿರುವ ಭಾಷಣದ ಒಂದಂಶವನ್ನು ಸೇರಿಸಲಾಗಿದೆ. ಹಾಗಾದ್ರೆ ಪಠ್ಯದಲ್ಲಿ ಮಹಮ್ಮದ್ ಅಲಿ ಜಿನ್ನಾ ಹೆಸರು ಸೇರಿಸಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ. ಈಶ್ವರ ಲಿಂಗ ಒಡೆದ ಔರಂಗಜೇಬನ ಹೆಸರು ಸೇರಿಸಬೇಕಿತ್ತಾ? ಪಠ್ಯದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್, ಅಲೆಗ್ಸಾಂಡರ್ ದಿ ಗ್ರೇಟ್ ಇವುಗಳನ್ನು ನಮ್ಮ ಮಕ್ಕಳು ಓದುತ್ತಿದ್ದರು. ಯಾರು ನಮ್ಮ ದೇಶವನ್ನು ಹಾಳು ಮಾಡಿದ್ರೋ, ನಮ್ಮ ಸಂಸ್ಕೃತಿಯನ್ನು ಒಡೆದು ಪುಡಿ ಪುಡಿ ಮಾಡಿದ್ರೋ, ಅಂಥವರ ವೈಭವೀಕರಣ ನಮ್ಮ ಪಠ್ಯದಲ್ಲಿ ಇತ್ತು. ಭಗತ್ ಸಿಂಗ್ ಪಠ್ಯ ತೆಗೆದಿದ್ದು ಸುಳ್ಳು. ನಾರಾಯಣ್ ಗುರು ವಿಚಾರ ತೆಗೆದಿದ್ದು ಸುಳ್ಳು. ಹೆಡ್ಗೇವಾರ್ ಹೆಸರು ಹೇಳ್ತಿದಾರೆ ಸುಳ್ಳು.
೧೯೨೫ ರಲ್ಲಿ ಹಿಂದೂ ಸಮಾಜ ಒಂದು ಮಾಡುವ ಪ್ರಯತ್ನವನ್ನು ಹೆಡ್ಗೇವಾರ್ ಮಾಡಿದ್ರು. ಹೆಡ್ಗೇವಾರ್ ವಿಚಾರ ಹರಡದೇ ಇದ್ದಿದ್ರೇ ಈ ದೇಶ ತುಂಡು ತುಂಡಾಗಿ ಹೋಗ್ತಿತ್ತು. ಹಿಂದುತ್ವ ಇಷ್ಟೂ ಜಾಗೃತವಾಗಿರೋವಾಗಲೇ ರಾಷ್ಟ್ರದ್ರೋಹಿಗಳು, ಭಯೋತ್ಪಾದಕರು ಆಟ ಆಡ್ತಿದಾರೆ. ವಿಚಾರವಾದಿಗಳು ಅಂತಾ ಹೇಳಿಕೊಂಡು ತಿರುಗಾಡೋರಿಗೆ ಅದೇ ಆನಂದ, ಟಿಪ್ಪು ಸುಲ್ತಾನ್ ಬಗ್ಗೆ ಹೇಳಿದ್ರೆ ಅದೇ ಆನಂದ ಯಾರು ಈ ದೇಶವನ್ನು ಹಾಳು ಮಾಡಿದ್ರೋ ಅವ್ರದೇ ಪಠ್ಯ ಇರಬೇಕೆನ್ನುವ ಆಸೆ ಅವ್ರದು ಎಂದರು.
ಇನ್ನು ವಿಚಾರವಾದಿಗಳ ವಿಚಾರವನ್ನು ನಾವು ಇಷ್ಟು ದಿನ ವಿರೋಧ ಮಾಡಲಿಲ್ಲ. ಪಠ್ಯ ಪುಸ್ತಕ ರಚನಾ ಸಮಿತಿ ರಾಷ್ಟ್ರಭಕ್ತಿಯನ್ನು ಮಕ್ಕಳಿಗೆ ಹೇಳಿಕೊಡಲು ತೀರ್ಮಾನ ಮಾಡಿದೆ. ಹಾಗಾಗಿ ರಾಷ್ಟ್ರೀಯ ಮಹಾನ್ ಪುರುಷರ ವಿಚಾರವನ್ನು ಮುಂದುವರೆಸಲಾಗ್ತಿದೆ ತಪ್ಪೇನು? ಸಂವಿಧಾನ ಬದ್ಧವಾಗಿ ಬಡೆಯುತ್ತಿರೋದನ್ನು ಎಲ್ಲರೂ ಒಪ್ಪಿಕೋಬೇಕು. ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕು ಅಂತಾ ನಮ್ಮ ಸರ್ಕಾರ ತೀರ್ಮಾನ ಮಾಡಿದೆ. ಇದನ್ನ ಸಿದ್ದರಾಮಯ್ಯ, ಡಿಕೆಶಿ ವಿರೋಧ ಮಾಡಲ್ಲ ಅಂತ ನಾವೇನು ಅಂದುಕೊಂಡಿರಲಿಲ್ಲ. ಸ್ವಲ್ಪ ಸ್ವಲ್ಪ ವಿರೋಧ ಮಾಡ್ತಿದಾರೆ, ಇದನ್ನ ನೋಡಿದ್ರೆ ಅವ್ರಲ್ಲಿ ಒಗ್ಗಟ್ಟಿಲ್ಲ. ಇಲ್ಲಾಂದಿದ್ರೆ ಅದಕ್ಕೊಂದು ಮೆರವಣಿಗೆ ಮಾಡಿರೋರು ಯಾಕಂದ್ರೆ ಅವರಿಗೆ ಉದ್ಯೋಗ ಇಲ್ವಲ್ಲ. ಮೇಕೆದಾಟು ನಾಲ್ಕು ದಿನ ಹೋರಾಡಿದರು. ಇವರಿಗೆ ದೇಶ ಬೇಡ ಯಾರೂ ಬೇಡ ಹಿಜಾಬ್ ಹಿಡ್ಕೊಂಡು ಹೋದರು. ದೇಶದಲ್ಲಿ ಹಿಂದೂ ಸಮಾಜ, ರಾಷ್ಟ್ರಭಕ್ತಿ ಜಾಗೃತಿ ಆಗಿದೆ. ಇದನ್ನು ಜನ ಮೆಚ್ಚುತ್ತಿದ್ದಾರೆ ಅಂದರು.