ಬೆಂಗಳೂರು : ನಾಳೆ ರಾಜ್ಯ ಕಾಂಗ್ರೆಸ್ ಸಾರಥಿಯಾಗಿ ಡಿ.ಕೆ ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಇದಕ್ಕೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದರ ಮಧ್ಯೆ ಡಿ.ಕೆ ಶಿವಕುಮಾರ್ ಜ್ಯೂಂ ಆಯಪ್ ಮೂಲಕವೇ ಕಾರ್ಯಕ್ರಮ ನೋಡಿ, ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಕೆಲವು ಕಡೆ ಪೊಲೀಸರಿಂದ ತೊಂದರೆಯಾಗಿದೆ, ಈ ಬಗ್ಗೆ ಆರೋಪಗಳು ಬಂದಿವೆ. ನಾನು ಗೃಹ ಸಚಿವ, ಡಿಜಿಪಿ ಜೊತೆ ಮಾತನಾಡಿದ್ದೇನೆ. ಸಿಎಂ ಅವರು ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ರೈಟಿಂಗ್ ನಲ್ಲಿ ಬೇಕಾಗಿಲ್ಲ. ಸದ್ಯ ಜೂಮ್ ಆಪ್ ಮೂಲಕವೇ ಕಾರ್ಯಕ್ರಮ ನೋಡಿ. ಯಾರೂ ಇಲ್ಲಿಗೆ ಬರಬೇಡಿ, ಪೊಲೀಸರು ಯಾರೂ ತೊಂದರೆ ಮಾಡುವಂತಿಲ್ಲ, ಏಕೆಂದರೆ ಸಿಎಂ ಅವರೇ ಅವಕಾಶ ನೀಡಿದ್ದಾರೆ. ಹೀಗಾಗಿ ಕಾರ್ಯಕರ್ತರು ಆತಂಕಪಡುವ ಅಗತ್ಯವಿಲ್ಲ, ನಾವು ಇಲ್ಲಿ ಪ್ರತಿಜ್ಙೆ ಮಾಡುತ್ತೇನೆ. ಆಗ ನೀವು ಅಲ್ಲಿಯೇ ನನಗೆ ಆಶೀರ್ವಾದ ಮಾಡಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿದ್ದಾರೆ.
ನಮ್ಮ ಜತೆ ನೀವು ಟಿವಿ ಹಾಗೂ ಜೂಮ್ ಮೂಲಕ ನಿಮ್ಮ ಪ್ರದೇಶಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ತಾವೆಲ್ಲಾ ಸಹಕಾರ ನೀಡಬೇಕು. ಕಾರ್ಯಕರ್ತರು ಹಗಲು ರಾತ್ರಿ ದುಡಿಯುತ್ತಿದ್ದಾರೆ. ಎಲ್ಲ ಮಠ ಹಾಗೂ ಸಮುದಾಯದ ಗುರು ಹಿರಿಯರು ಆಶೀರ್ವಾದ ಮಾಡಬೇಕು ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ. ಜನರು ಕೂಡ ನಾವು ನೀಡಿರುವ ಸಂಖ್ಯೆಗೆ ಮಿಸ್ ಕಾಲ್ ನೀಡಿ ಆ ಮೂಲಕ ಆಶೀರ್ವಾದ ನೀಡಬಹುದು ಎಂದರು.
ನನ್ನ ಮನೆಯಿಂದಲೂ ಇಬ್ಬರು ಮಾತ್ರ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಹೊರ ರಾಜ್ಯಗಳಿಂದ ಐದಾರು ಮಂದಿ ಬರುತ್ತಾರೆ, ದಕ್ಷಿಣ ರಾಜ್ಯಗಳಿಂದ ಒಬ್ಬೊಬ್ಬರು ಬರುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯಕರ್ಶಿ ಕೆ.ಸಿ.ವೇಣುಗೋಪಾಲ್ ನಾಳೆ ಬರುತ್ತಿದ್ದಾರೆ ಎಂದು ಹೇಳಿದರು.