ಬಂಟ್ವಾಳ: ಮಾಸ್ ಬೇಝ್ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವನ್ನು ಕೇಡರ್ ಬೇಝ್ ಪಕ್ಷವಾಗಿ ಸಂಘಟಿಸುವುದು ನಮ್ಮ ಮುಂದಿನ ಗುರಿಯಾಗಿದ್ದು ಈ ಹಿನ್ನೆಲೆಯಲ್ಲಿ 2021ನೇ ಇಸವಿ ಕಾಂಗ್ರೆಸ್ ಪಾಲಿಗೆ ಹೋರಾಟ ಮತ್ತು ಸಂಘಟನಾ ವರ್ಷವಾಗಿರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ವತಿಯಿಂದ ತಾಲೂಕಿನ ಬಿ.ಸಿ.ರೋಡ್ ಸಾಗರ ಸಭಾ ಭವನದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಮೈಸೂರು ಪ್ರಾಂತ್ಯದ ಪ್ರಮುಖ ಪ್ರತಿನಿಧಿಗಳ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ವೇಳೆ ಮಾತನಾಡಿದ ಅವರು ‘ದಕ್ಷಿಣ ಕನ್ನಡ ಜಿಲ್ಲೆ ದೇಶಕ್ಕೆ ವಿದ್ಯಾದಾನ, ಆರ್ಥಿಕ ಶಕ್ತಿ ಕೊಟ್ಟ ಭೂಮಿ. ಈ ಭೂಮಿಯನ್ನು ಈಗ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಈ ಭೂಮಿಯಲ್ಲಿ ಮತದಾರರು ಯಾರಿಗೆ ಬೆಂಬಲ ನೀಡುತ್ತಾರೋ ಅವರ ಸರ್ಕಾರ ಆಡಳಿತಕ್ಕೆ ಬಂದಿರೋದು ಇತಿಹಾಸದಲ್ಲಿ ನೋಡಿದ್ದೇವೆ. ಈ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಾಗುತ್ತಿದೆ ಎಂದು ಪರೋಕ್ಷವಾಗಿ ಆಡಳಿತ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಇಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದರೂ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಇಲ್ಲಿಗೆ ಬಂದಿದ್ದೇನೆ. ಕಾರ್ಯಕರ್ತರ ಧ್ವನಿ ಅಧ್ಯಕ್ಷರ ಧ್ವನಿಯಾಗಬೇಕು. ಹೀಗಾಗಿ ಮೈಸೂರು ವಿಭಾಗದ ನಾನಾ ಜಿಲ್ಲೆಗಳ ಎಲ್ಲ ಅಧ್ಯಕ್ಷರು, ಸೋತ ಅಭ್ಯರ್ಥಿಗಳನ್ನು ಆಹ್ವಾನಿಸಿ, ಸ್ಥಳೀಯ ಸಮಸ್ಯೆಗಳೇನಿವೆ? ಎಂಬುದನ್ನು ಆಲಿಸುತ್ತಿದ್ದೇವೆ. ನಾವಿದನ್ನು ಜನರ ಮುಂದೆ ಇಡುತ್ತೇವೆ. ಸ್ಥಳೀಯ ಸಮಸ್ಯೆ ಜತೆಗೆ ಸಂಘಟನೆ ವಿಚಾರವಾಗಿ ಪ್ರತಿಯೊಬ್ಬ ಬ್ಲಾಕ್ ಅಧ್ಯ ಕ್ಷರೂ ಇಂದು ಮಾತನಾಡಲಿದ್ದಾರೆ. ಪಕ್ಷವನ್ನು ಮಾಸ್ ಬೇಸ್ ನಿಂದ ಕೇಡರ್ ಬೇಸ್ ಆಗಿ ಪರಿವರ್ತಿಸುತ್ತೇವೆ ಎಂದು ಪ್ರತಿಜ್ಞಾ ದಿನ ತಿಳಿಸಿದ್ದೇವೆ. ಈಗ ಆ ಸಂಕಲ್ಪವನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಅನುಷ್ಠಾನಕ್ಕೆ ತರುತ್ತಿದ್ದೇವೆ ಎಂದು ಭರವಸೆ ನೀಡಿದರು.
ಪಕ್ಷದ ಗುರಿ ಮತ್ತು ಸಿದ್ಧಾಂತವನ್ನು ದೂರ ಇಟ್ಟಾಗ ನಮಗೆ ಸೋಲಾಗುತ್ತದೆ ಎಂದು ಜವಾಹರಲಾಲ್ ನೆಹರೂ ಅಂದೇ ಹೇಳಿದ್ದರು. ಯಾವುದೇ ಒತ್ತಡ ಇದ್ದರೂ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಪಕ್ಷದ ಗುರಿ ಮತ್ತು ಸಿದ್ಧಾಂತವನ್ನು ತಮ್ಮ ಅಡಿಪಾಯವನ್ನಾಗಿ ಮಾಡಬೇಕು ಎಂದರು.