ಕೊಪ್ಪಳ : ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಹೋಗಬೇಕಾದರೆ ಮತ್ತೆ ಸಿದ್ಧರಾಮಯ್ಯ ಅವರು ಶಾಸಕರಾಗಬೇಕೆಂದು ಶಾಸಕ ರಾಘವೇಂದ್ರ ಹಿಟ್ನಾಳ್ ಅಭಿಪ್ರಾಯಿಸಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ರಾಘವೇಂದ್ರ ಹಿಟ್ನಾಳ್, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ ಮತ್ತೆ ಅಧಿಕಾರ ಸ್ವೀಕರಿಸಬೇಕು. ಇದು ಜನರ ಕೂಗಾಗಿದ್ದು, ನಮ್ಮೆಲ್ಲರ ಬೆಂಬಲವಿದೆ ಎಂದರು. ಸಿದ್ಧರಾಮಯ್ಯ ಅವರು ತಮ್ಮ ಆಡಳಿತ ಅವಧಿಯಲ್ಲಿ 15 ಲಕ್ಷ ಮನೆಗಳ ನಿರ್ಮಾಣಕ್ಕೆ ನೆರವು ನೀಡಿದ್ದರು. ಜೊತೆಗೆ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಸ್ಕೀಮ್ ಗಳನ್ನು ಒದಗಿಸಿದ್ದರು. ಆದರೆ ಬಿಜೆಪಿ ಸರಕಾರದಿಂದ ಜನರು ರೋಸಿ ಹೋಗಿದ್ದಾರೆ ಎಂದರು.
ರಾಜಕೀಯದಲ್ಲಿ ಸೀನಿಯರ್ ಆದ ಮೇಲೆ ಪೈಪೋಟಿ ಅನ್ನುವುದು ಇದ್ದೆ ಇರುತ್ತದೆ. ಅದನ್ನು ಹೈಕಮಾಂಡ್ ತೀರ್ಮಾನಿಸುದರ ಜೊತೆಗೆ ಶಾಸಕರ ಅಭಿಪ್ರಾಯಗಳನ್ನು ತೆಗೆದುಕೊಳ್ಳುತ್ತದೆ. ಕಾಂಗ್ರೆಸ್ ಸರಕಾರ ಬರಲು ಮಾಧ್ಯಮದವರು ಕೈ ಜೋಡಿಸಬೇಕು. ಬೆಲೆ ಏರಿಕೆಯ ವಿರುದ್ಧವೂ ನಾವೆಲ್ಲರೂ ಕೈ ಜೋಡಿಸಬೇಕಾಗಿದೆ. ರೈತ ಮಹಿಳೆಯರು ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದಾರೆ ಎಂದು ಹೇಳಿದರು.