ಪುತ್ತೂರು: ಲಾರಿ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ಬೈಪಾಸ್ ರಸ್ತೆಯ ತೆಂಕಿಲ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಮೃತ ಸ್ಕೂಟರ್ ಸವಾರನನ್ನು ಬೆಳ್ಳಾರೆ ಕೋಡಿಬೈಲು ನಿವಾಸಿ ಸತ್ಯನಾರಾಯಣ ಭಟ್ ಎಂದು ಗುರುತಿಸಲಾಗಿದೆ. ಮೃತರು ಸ್ಕೂಟರ್ ನಲ್ಲಿ ಬೆಳ್ಳಾರೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ವಿರುದ್ಧ ಧಿಕ್ಕಿನಿಂದ ಬರುತ್ತಿದ್ದ ಲಾರಿ ನಡುವೆ ತೆಂಕಿಲ ಎಂಬಲ್ಲಿ ಢಿಕ್ಕಿ ಸಂಭವಿಸಿದೆ. ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸತ್ಯನಾರಾಯಣ ಭಟ್ ಉದ್ಯಮಿ, ಕೃಷಿ ಉಪಕರಣಗಳ ಸಂಶೋಧಕರಾಗಿ,ಧಾರ್ಮಿಕ ಸಂಘಟಕರಾಗಿದ್ದರು. ಬೆಳ್ಳಾರೆ ಪರಿಸರದಲ್ಲಿ ಚಿರಪರಿಚಿತರಾಗಿದ್ದ ಸತ್ಯನಾರಾಯಣ ಕೋಡಿಬೈಲುರವರು ಕೋಡಿಬೈಲು ಕೃಷಿ ಏಜೆನ್ಸೀಸ್ ಮಾಲಕರಾಗಿ ಅನೇಕ ಕೃಷಿ ಉಪಕರಣಗಳ ಸಂಶೋಧಕರಾಗಿ ಹೆಸರು ಮಾಡಿದ್ದರು. ವಿಶ್ವ ಹಿಂದೂ ಪರಿಷತ್ ಮುಖಂಡರಾಗಿ ಸೇವೆ ಸಲ್ಲಿಸಿದ್ದರು.