ಹಾಸನ: ಸಮಾಜದಲ್ಲಿ ಅಶಾಂತಿ, ಮತೀಯ ಗಲಭೆ, ದೊಂಬಿ ಹೆಚ್ಚಾಗಿ ಸಾವು-ನೋವು ಕಾಡಲಿವೆ ಎಂದು ಹಾರನಹಳ್ಳಿ ಕೋಡಿಮಠದಲ್ಲಿ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಅಶಾಂತಿ, ಮತೀಯ ಗಲಭೆ, ದೊಂಬಿಯಿಂದ ಸಾವು ನೋವುಗಳು ಹೆಚ್ಚಾಗಲಿವೆ ಎಂದು ಕಳವಳ ಹೊರ ಹಾಕಿದ್ದಾರೆ. ಅಂತೆಯೇ ಎಲೆಕ್ಟ್ರಿಕ್ನಿಂದ ಹೆಚ್ಚು ಅಪಾಯವಿದೆ. ಕೊಲೆಗಳು ಹೆಚ್ಚಾಗುತ್ತವೆ ಎಂದಿರುವ ಅವರು, ಸುಂದರವಾದ ಹೆಣ್ಣು ಮಕ್ಕಳಿಗೆ ಅಂಗಾಂಗ ಸಮಸ್ಯೆ ಉಂಟಾಗುತ್ತದೆ. ರಾಜಕೀಯ ವಿಪ್ಲವವಾಗಿ ರಾಜಕೀಯ ಗುಂಪುಗಳು ಸೃಷ್ಟಿಯಾಗುತ್ತವೆ ಎಂದು ನುಡಿದಿದ್ದಾರೆ. ಬೆಂಕಿಯ ಅನಾಹುತ, ಗಾಳಿ, ಗುಡುಗು ಸಿಡಿಲಿನಿಂದ ವಿಪರೀತ ಅನಾಹುತಗಳಾಗುತ್ತವೆ ಎಂದಿರುವ ಶ್ರೀಗಳು, ಭಾರತದಲ್ಲಿ ಈ ಸಂವತ್ಸರದಲ್ಲಿ ಇಲ್ಲಿಯವರೆಗೂ ಕಂಡು, ಕೇಳರಿಯದಂತ ಬಹುದೊಡ್ಡ ಆಘಾತ ಆಗುತ್ತದೆ ಎಂದಿದ್ದಾರೆ.
ಜಗತ್ತಿನ ಸಾಮ್ರಾಟರು ಎನಿಸಿಕೊಂಡವರು ತಲ್ಲಣಗೊಳ್ಳುತ್ತಾರೆ. ಸಾವು-ನೋವುಗಳು ಹೆಚ್ಚಾಗುತ್ತವೆ ಎಂದು ಆಘಾತಕಾರಿ ಭವಿಷ್ಯ ಸ್ಫೋಟಿಸಿದ್ದಾರೆ. ಮಲೆನಾಡು ಬಯಲಾಗಲಿದೆ: ಈ ಬಾರಿ ಮುಂಗಾರು ಚೆನ್ನಾಗಿ ಆಗುತ್ತದೆ, ಆದರೆ ಹಿಂಗಾರು ಕಡಿಮೆಯಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಲೆನಾಡು ಬಯಲಾಗುತ್ತದೆ, ಬಯಲು ಮಲೆನಾಡಾಗುತ್ತದೆ. ನಿರೀಕ್ಷಿತ ಪ್ರದೇಶದಲ್ಲಿ ಮಳೆ ಸರಿಯಾಗಿ ಆಗುವುದಿಲ್ಲ ಎಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದಾರೆ.