ಕಡಬ: ಮದ್ಯ ಹೆಚ್ಚು ನೀಡದ ಕೋಪದಲ್ಲಿ ವ್ಯಕ್ತಿಯೋರ್ವನ ಮೇಲೆ ಮಲಗಿದ್ದಲ್ಲಿಗೆ ಬಂದು ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಕಡಬ ತಾಲೂಕಿನ ಬಂಟ್ರ ಗ್ರಾಮದ ನೆಕ್ಕಿತಡ್ಕ ಎಂಬಲ್ಲಿ ನಡೆದಿದೆ.
ಕೇರಳದ ಕೊಲ್ಲಂ ಜಿಲ್ಲೆಯ ಕೆಟ್ಟಾಕೆರೆ ಚರಿಪರಂಬು ಎಂಬಲ್ಲಿನ ನಿವಾಸಿಗಳಾದ ಪ್ರಸಾದ್ ಹಾಗೂ ಅಜಿತನ್ ಎಂಬವರು ಕಡಬದ ನಕ್ಕಿತ್ತಡ್ಕದಲ್ಲಿ ಅಲೆಕ್ಸಾ ಎಂಬವರ ಮಾಲಕತ್ವದ ರಬ್ಬರ್ ತೋಟದಲ್ಲಿ ಟ್ರ್ಯಾಪರ್ ಆಗಿ ಕೆಲಸ ಮಾಡುತ್ತಿದ್ದು, ಅಜಿತನ್ ಅವರ ಬಾಡಿಗೆ ಮನೆಯಲ್ಲಿ ಪ್ರಸಾದ್ ಜೊತೆಗೆ ಮದ್ಯ ಸೇವನೆ ಮಾಡುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಪ್ರಸಾದ್ ಅಜಿತ್ ಗೆ ಹೆಚ್ಚು ಮದ್ಯ ನೀಡಿಲ್ಲ ಎಂದು ಕೋಪಗೊಂಡಿದ್ದು, ಇದೇ ಕೋಪದಿಂದ ಪ್ರಸಾದ್ ಮಲಗಿದ ಮೇಲೆ ಅವರ ಮೇಲೆ ಚೂರಿಯಿಂದ ಇರಿದಿದ್ದು, ಇದರಿಂದ ಗಂಭೀರ ಗಾಯಗೊಂಡ ಪ್ರಸಾದ್ ಅವರನ್ನು ಸ್ಥಳೀಯರಾದ ಉಮ್ಮಚನ್, ಗಿರೀಶ್, ನಝೀರ್ ಅವರು ಕಡಬ ಸರಕಾರಿ ಆಸ್ಪತ್ರೆಗೆ ಕರೆತಂದು ಅಲ್ಲಿಂದ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರೋಪಿ ಅಜಿತನ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.