ಮಂಗಳೂರು: ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗ ವ್ಯಾಪ್ತಿಯಲ್ಲಿ ಕೊರೊನಾ ಸಂದರ್ಭದಲ್ಲಿ ನಿಲುಗಡೆಯಾಗಿದ್ದ ರೈಲುಗಳು ಹಂತ ಹಂತವಾಗಿ ಸಂಚಾರ ಪುನರಾರಂಭಿಸಿದ್ದು, ಜನವರಿ ಮೊದಲ ವಾರದಲ್ಲಿ ಇನ್ನಷ್ಟು ರೈಲುಗಳು ಓಡಾಟ ನಡೆಸಲಿವೆ ಎಂದು ವಿಭಾಗೀಯ ಮ್ಯಾನೇಜರ್ ತ್ರಿಲೋಕ್ ಕೊಠಾರಿ ತಿಳಿಸಿದ್ದಾರೆ.
ಬುಧವಾರ ಆನ್ಲೈನ್ ಮೂಲಕ ನಡೆದ ವಿಭಾಗೀಯ ರೈಲು ಬಳಕೆದಾರರ ಸಲಹಾ ಸಮಿತಿ (ಡಿಆರ್ಯುಸಿಸಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2020- 21ನೇ ಸಾಲಿನಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಪ್ರಯಾಣಿಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ವರ್ಷ 27.76 ಕೋಟಿ ರೂ. ಗಳ ಬಜೆಟ್ ಮಂಡಿಸಲಾಗಿದೆ ಎಂದರು.
ಸಲಹಾ ಸಮಿತಿ ಸದಸ್ಯ ಮಂಗಳೂರಿನ ಹನುಮಂತ ಕಾಮತ್ ಅವರು, ಕಳೆದ 2 ವರ್ಷಗಳಲ್ಲಿ ಕೊರೊನಾ ಕಾರಣದಿಂದಾಗಿ ಹೆಚ್ಚು ಸಭೆ ಹಾಗೂ ಚರ್ಚೆ ನಡೆಸಲು ಸಾಧ್ಯವಾಗಿಲ್ಲ; ಹಾಗಾಗಿ ಪ್ರಸಕ್ತ ಸಲಹಾ ಸಮಿತಿಯ ಅವಧಿಯನ್ನು ಇನ್ನೂ 2 ವರ್ಷ ಮುಂದುವರಿಸಬೇಕೆಂದು ಸಲಹೆ
ಮಾಡಿದರು.
ಮಂಗಳೂರು- ಕಬಕ ಪುತ್ತೂರು ರೈಲಿನ ಸಂಚಾರವನ್ನು ಸುಬ್ರಹ್ಮಣ್ಯ ತನಕ ವಿಸ್ತರಿಸುವುದು, ಬೆಂಗಳೂರು- ಕಣ್ಣೂರು ಎಕ್ಸ್ಪ್ರೆಸ್ ರೈಲು ಮಂಗಳೂರು ಜಂಕ್ಷನ್ ತಲಪುವ ವೇಳೆಯನ್ನು ಪರಿಷ್ಕರಿಸುವುದು, ಚೆರುವತ್ತೂರು- ಮಂಗಳೂರು ಪ್ಯಾಸೆಂಜರ್ ರೈಲಿನ ಸಂಚಾರ ಪುನರಾರಂಭ ಮಾಡುವುದು, ವಿಜಯಪುರ- ಮಂಗಳೂರು ಜಂಕ್ಷನ್ ರೈಲನ್ನು ಮಂಗಳೂರು ಸೆಂಟ್ರಲ್ಗೆ ವಿಸ್ತರಿಸುವುದು, ಮುಂಬಯಿ- ಮಂಗಳೂರು ಮತ್ಸಗಂಧಾ ಎಕ್ಸ್ಪ್ರೆಸ್ ರೈಲಿಗೆ ಮಂಗಳೂರು ಜಂಕ್ಷನ್ನಲ್ಲಿ ನಿಲುಗಡೆ ಕೊಡುವುದು, ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಎಲೆಕ್ಟ್ರಾನಿಕ್ ವ್ಯವಸ್ಥೆಯಲ್ಲಿ ಟಿಕೆಟ್ ಮಾಡಲು ಅವಕಾಶ ಮತ್ತಿತರ ಬೇಡಿಕೆಗಳನ್ನು ಹನುಮಂತ ಕಾಮತ್ ಮಂಡಿಸಿದರು.


