ಸುಳ್ಯ: ಪ್ರಕೃತಿ, ಗಾಳಿ, ಮರಗಳನ್ನು ಚಿತ್ರಗಳ ಮೂಲಕ ತೋರಿಸಿ ಮಾಡುವ ಪರಿಸರ ಪಾಠವು ಒಂದಂಕ ದ ಪ್ರಶ್ನೆಗಳಿಗಷ್ಟೇ ಸೀಮಿತ. ಹಾಗಾಗಿ ಮುಕ್ಕೂರು ಬೇಸಗೆ ಶಿಬಿರದ ಎರಡನೆ ದಿನ ಚಿಣ್ಣರು ಸಂಭ್ರಮಿಸಿದ್ದು ನಾಲ್ಕು ಗೋಡೆಗಳ ಮಧ್ಯೆ ಅಲ್ಲ ಗೌರಿ ಹೊಳೆಯ ಮಡಿಲಲ್ಲಿ.
ಅರ್ಧ ದಿನ ರಂಗಾಭಿನಯದ ಚಟುವಟಿಕೆಯ ಬಳಿಕ ಉಳಿದ ಅರ್ಧ ದಿನದ ಹೊತ್ತು ಪರಿಸರದ ನೈಜ ಪಾಠವನ್ನು ಶಿಬಿರದ ಮೂಲಕ ಹೇಳುವ ಪ್ರಯತ್ನ ನಡೆಯಿತು. 90 ಕ್ಕೂ ಮಿಕ್ಕಿದ ವಿದ್ಯಾರ್ಥಿ ಗಳು ಮರ ಗಿಡಗಳ ನಡುವೆ ನಡೆದಾಡುತ್ತಾ ತಲುಪಿದ್ದು ಕುಂಜಾಡಿ ಪರಿಸರದಲ್ಲಿ ಹರಿಯುವ ಗೌರಿ ಹೊಳೆ ತಟಕ್ಕೆ. ಚಿಣ್ಣರು ನೀರಲ್ಲಿ ಓಡಾಡಿದರು, ಮರಳಲ್ಲಿ ಆಟವಾಡಿದರು. ಮರದ ಇಳಿಬೇರು ಗಳಲ್ಲಿ ಜೀಕಿದರು.ಹಣ್ಣುಗಳನ್ನು ತಿಂದರು. ಜೀವ ವೈವಿಧ್ಯತೆಗೆ ಜೈ ಹೋ ಅಂದರು.
ಖ್ಯಾತ ರಂಗಕರ್ಮಿ ಕೃಷ್ಣಪ್ಪ ಬಂಬಿಲ,ಗಾನಸಿರಿ ತಂಡದ ಗಾಯಕಿ ಮಧುಶ್ರೀ ಐವರ್ನಾಡು ನೇತೃತ್ವದಲ್ಲಿ ಸಂಪನ್ಮೂಲ ತಂಡ ಮಕ್ಕಳೊಂದಿಗೆ ಮಕ್ಕಳಾಗಿ ಶಿಬಿರವನ್ನು ನಡೆಸಿಕೊಟ್ಟಿತ್ತು.
ಪ್ರಾರಂಭದಲ್ಲಿ ಕೃಷ್ಣಪ್ಪ ಬಂಬಿಲ ಅವರು ಅಭಿನಯ ಗೀತೆಗಳು, ವಿಶೇಷ ಹಾಡು, ನಿರೂಪಣೆ ಕೌಶಲ್ಯದ ಬಗ್ಗೆ ಚಟುವಟಿಕೆ ನೀಡಿದರು.ಹೊಳೆ ವಿಹಾರದಲ್ಲಿ ಅಭಿನಯ ಕೌಶಲ್ಯ, ಹಾಡು, ಪ್ರಕೃತಿ ಬಗ್ಗೆ ಮಾಹಿತಿ ನೀಡಲಾಯಿತು. ತಂಡದಲ್ಲಿ ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ ದ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್., ಸದಸ್ಯ ರಕ್ಷಿತ್ ಗೌಡ ಕಾನಾವು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಕುಂಡಡ್ಕ, ಸವಿತಾ ಬೊಣ್ಯಕುಕ್ಕು ಸಹಕರಿಸಿದರು.
ಬೇಸಗೆ ಶಿಬಿರದ ಮಾಹಿತಿ ಪಡೆದ ಬೆಂಗಳೂರಿನ ಇಬ್ಬರು ಚಿಣ್ಣರು ಶಿಬಿರಕ್ಕೆ ಆಗಮಿಸಿ ಸಂಭ್ರಮಿಸಿ ದರು.ಚಿನ್ನಾವರ, ಕಲ್ಪತ್ತಬೈಲು, ಪೆರುವಾಜೆ, ಮುಕ್ಕೂರು, ಮರ್ಕಂಜ ಸೇರಿದಂತೆ ವಿವಿಧ ಶಾಲೆಯ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡರು.