ಬೆಂಗಳೂರು: ನಗರದ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಐವರು ವಿದ್ಯಾರ್ಥಿಗಳು ಪ್ರವಾಸಕ್ಕಾಗಿ ಕಾರು ಬಾಡಿಗೆ ಪಡೆದಿದ್ದು, ಕಾರು ಬಾಡಿಗೆ ನೀಡಿದವರೇ ವಿದ್ಯಾರ್ಥಿಗಳನ್ನು ಅಪಹರಿಸಿ ಗೃಹ ಬಂಧನದಲ್ಲಿರಿಸಿ ಹಣ ಸುಲಿಗೆ ಮಾಡಿದ ಘಟನೆ ನಡೆದಿದೆ. ಆರೋಪಿಗಳನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಪಶ್ಚಿಮ ಬಂಗಾಳ ಮೂಲದ ಮನೋಜ್ ಬನಿವಾಲ್ ಸೇರಿ ಐವರು ವಿದ್ಯಾರ್ಥಿಗಳಿಂದ 50 ಸಾವಿರ ರೂ. ಸುಲಿಗೆ ಮಾಡಿದ್ದಾರೆ ಎನ್ನಲಾಗಿದೆ.
ಬಂಧಿತ ಆರೋಪಿಗಳು ಚಂದ್ರಾಲೇಔಟ್ ನಿವಾಸಿಗಳಾದ ನಿತಿನ್ (32), ಶಶಾಂಕ್(34) ಮತ್ತು ವಿನೋದ್(30) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 30 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಕಳೆದ ವಾರ ಐವರು ವಿದ್ಯಾರ್ಥಿಗಳನ್ನು ಅಪಹರಿಸಿ 50 ಸಾವಿರ ರೂ. ಸುಲಿಗೆ ಮಾಡಿದ್ದರು. ಈ ಸಂಬಂಧ ಮನೋಜ್ ಬನಿವಾಲ್ ಎಂಬ ವಿದ್ಯಾರ್ಥಿ ದೂರು ನೀಡಿದ್ದ ಎಂದು ಪೊಲೀಸರು ಹೇಳಿದರು.
ಘಟನೆಯ ವಿವರ: ವಿದ್ಯಾರ್ಥಿಗಳು ನ.17ರಂದು ಮಡಿಕೇರಿಗೆ ಹೋಗಲು ಆರೋಪಿ ವಿನೋದ್ ಮೂಲಕ ದಿನಕ್ಕೆ 2500 ರೂ. ಬಾಡಿಗೆ ಹಾಗೂ 500 ರೂ. ಕಮಿಷನ್ ಸೇರಿ 3000 ರೂ.ಗೆ ಒಂದು ಕಾರು ಬಾಡಿಗೆ ಪಡೆದುಕೊಂಡಿದ್ದರು. ಶ್ಯೂರಿಟಿಗಾಗಿ ವಿದ್ಯಾರ್ಥಿಯೊಬ್ಬನ ಲ್ಯಾಪ್ಟಾಪ್ ಮತ್ತು ಆಧಾರ್ ಕಾರ್ಡ್ ಹಾಗೂ ಕಾಲೇಜಿನ ಗುರುತಿನ ಚೀಟಿ ಪಡೆದುಕೊಂಡಿದ್ದರು. ಈ ವೇಳೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 100 ಕಿ.ಮೀ. ವೇಗದಲ್ಲಿ ಹೋಗಬಾರದು ಎಂದು ಷರತ್ತು ವಿಧಿಸಲಾಗಿತ್ತು. ಷರತ್ತಿಗೆ ಒಪ್ಪಿದ ವಿದ್ಯಾರ್ಥಿಗಳು 2 ದಿನಗಳ ಕಾಲ ಪ್ರವಾಸ ಮುಗಿಸಿಕೊಂಡು ಬಂದು, ವಾಪಸ್ ಬರುವಾಗ ಹೆದ್ದಾರಿಯಲ್ಲಿ 120 ಕಿ.ಮೀ. ವೇಗದಲ್ಲಿ ಕಾರು ಚಾಲನೆ ಮಾಡಿದ್ದಾರೆ.
ನಂತರದಲ್ಲಿ ನಾಗರಬಾವಿಯ ಮಂಜುನಾಥ ಎಂಟರ್ಪ್ರೈಸಸ್ ಕಚೇರಿಗೆ ಕಾರು ವಾಪಸ್ ನೀಡಲು ಬಂದಿದ್ದು, ಈ ವೇಳೆ ಆರೋಪಿ ವಿನೋದ್ ವಿದ್ಯಾರ್ಥಿಗಳು ವಿಧಿಸಿದ ಷರತ್ತು ಉಲ್ಲಂಘನೆ ಮಾಡಿದ ಬಗ್ಗೆ ತಕರಾರು ತೆಗೆದು, 1.20 ಲಕ್ಷ ರೂ. ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ವಿದ್ಯಾರ್ಥಿಗಳು ಅಷ್ಟು ನಗದನ್ನು ಕೊಡಲು ನಿರಾಕರಿಸದ್ದಕ್ಕೆ ವಿನೋದ್, ತನ್ನ ಇತರೆ ಇಬ್ಬರು ಸ್ನೇಹಿತರನ್ನು ಸ್ಥಳಕ್ಕೆ ಕರೆಸಿಕೊಂಡು ಐವರು ವಿದ್ಯಾರ್ಥಿ ಗಳನ್ನು ಅಪಹರಿಸಿ ಚಂದ್ರಾಲೇಔಟ್ನ ಮನೆಯೊಂದರಲ್ಲಿ ಒಂದು ದಿನ ಕೂಡಿ ಹಾಕಿ, ಹಲ್ಲೆ ನಡೆಸಿದ್ದಾರೆ.
ನಂತರದಲ್ಲಿ ಆರೋಪಿಗೆ ವಿದ್ಯಾರ್ಥಿಗಳು ಸ್ನೇಹಿತರ ಮೂಲಕ 50 ಸಾವಿರ ರೂ. ವರ್ಗಾವಣೆ ಮಾಡಿದ್ದಾರೆ. ಹಣ ಪಾವತಿಸಿದ ಬಳಿಕ ಆರೋಪಿಗಳು ವಿದ್ಯಾರ್ಥಿಗಳನ್ನು ಸಮೀಪದ ಪರಿಚಯಸ್ಥ ಅಂಗಡಿಗೆ ಕರೆದೊಯ್ದು 50 ಸಾವಿರ ರೂ. ಅನ್ನು ಪಡೆದಿದ್ದಾರೆ. ಈ ವೇಳೆ ವಿದ್ಯಾರ್ಥಿಗಳ ಮೊಬೈಲ್, ಲ್ಯಾಪ್ಟಾಪ್ಗಳನ್ನು ಕಸಿದಕೊಂಡು, ತಡರಾತ್ರಿ ವಿದ್ಯಾರ್ಥಿಗಳನ್ನು ಮನೆ ಬಳಿ ಡ್ರಾಪ್ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.