ತಿರುವನಂತಪುರ: ಕೇರಳದ ವಯನಾಡ್ ಜಿಲ್ಲೆಯ ಮಾನಂದವಾಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದ್ದ ಆದಿವಾಸಿ ಪಾನಿಯಾ ಸಮುದಾಯದ ಮೊದಲ ಪದವೀಧರರಾದ ಸಿ.ಮಣಿಕುಟ್ಟನ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿಯ ಟಿಕೆಟ್ ಅನ್ನು ನಿರಾಕರಿಸಿದ್ದಾರೆ. ಇದರಿಂದ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.
ಬಿಜೆಪಿಯು ಭಾನುವಾರ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿತ್ತು. ‘ಪನಿಯಾ ಸಮುದಾಯದ ಮಾದರಿ ಯುವಕರಾದ ಸಿ.ಮಣಿಕುಟ್ಟನ್ ಅವರನ್ನು ಮಾನಂದವಾಡಿ ಕ್ಷೇತ್ರಕ್ಕೆ ನಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದು ಬಿಜೆಪಿ ಘೋಷಿಸಿತ್ತು.
ಆದರೆ, ಈ ಬಗ್ಗೆ ಮಣಿಕುಟ್ಟನ್ ಸ್ಪಷ್ಟನೆ ನೀಡಿದ್ದು, ‘ನನಗೆ ರಾಜಕೀಯಕ್ಕೆ ಬರುವುದು ಇಷ್ಟವಿಲ್ಲ. ನನ್ನ ಕುಟುಂಬ ಮತ್ತು ವೃತ್ತಿ ನನಗೆ ಮುಖ್ಯವಾಗಿದೆ. ಸ್ಥಳೀಯ ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿದ್ದರು. ಅವರ ಆಹ್ವಾನವನ್ನು ನಾನು ನಿರಾಕರಿಸಿದ್ದೆ. ಆದರೂ, ಬಿಜೆಪಿ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರು ಇರುವುದನ್ನು ನೋಡಿ ನನಗೆ ಅಚ್ಚರಿಯಾಯಿತು’ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.
‘ನಾನು ಬಿಜೆಪಿಯ ಕಾರ್ಯಕರ್ತನೂ ಅಲ್ಲ. ನನಗೆ ರಾಜಕೀಯದಲ್ಲಿ ಆಸಕ್ತಿಯೂ ಇಲ್ಲ. ಹೀಗಾಗಿ, ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ’ ಎಂದು ಮಣಿಕುಟ್ಟನ್ ಸ್ಪಷ್ಟಪಡಿಸಿದ್ದಾರೆ. ವಯನಾಡ್ ನ ಮಾನಂದವಾಡಿ ಕ್ಷೇತ್ರದಲ್ಲಿ ಆದಿವಾಸಿಗಳಿಗೆ ಮೀಸಲಿಟ್ಟ ಸ್ಥಾನದಲ್ಲಿ ಬಿಜೆಪಿಯು ಮಣಿಕುಟ್ಟನ್ ಹೆಸರನ್ನು ಅಂತಿಮಗೊಳಿಸಿದೆ. ಮೊದಲು, ಇದು ಬೇರೆ ಯಾವುದೋ ವ್ಯಕ್ತಿಯಿರಬೇಕು ಎಂದು ಊಹಿಸಿದ್ದ ಮಣಿಕುಟ್ಟನ್ ಬಳಿಕ ಅದು ತನ್ನ ಹೆಸರೇ ಎಂದು ಖಾತ್ರಿಯಾದಾಗ ಚುನಾವಣೆಗೆ ಸ್ಫರ್ಧಿಸುವ ನಿರ್ಧಾರವನ್ನು ಹಿಂಪಡೆದುಕೊಂಡಿದ್ದಾರೆ.
ಮಣಿಕಂಡನ್ ಯಾನೆ ಮಣಿಕುಟ್ಟನ್ ಆದಿವಾಸಿ ಪಾನಿಯ ಸಮುದಾಯಕ್ಕೆ ಸೇರಿದವರಾಗಿದ್ದು, ತಮ್ಮ ಸಮುದಾಯದಲ್ಲೇ ಎಂಬಿಎ ಪದವಿ ಪಡೆದಿರುವ ಏಕೈಕ ವ್ಯಕ್ತಿಯಾಗಿದ್ದಾರೆ. ಎಂಬಿಎ ಪದವಿ ಪಡೆದಿರುವ ಮಣಿಕುಟ್ಟನ್ ಅವರು ಪ್ರಸ್ತುತ ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.