ಬೆಂಗಳೂರು: ಅಕ್ರಮ ಆಸ್ತಿಗಳ ಗಳಿಕೆ ಆರೋಪ ಹೊತ್ತುಕೊಂಡಿರುವ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿ ಡಾ.ಬಿ.ಸುಧಾ (ಕೆ.ಎ.ಎಸ್) ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಲ್ಲಿ ಭೂ ಒತ್ತುವರಿ ಅಧಿಕಾರಿಯಾಗಿದ್ದ ಡಾ. ಬಿ. ಸುಧಾ ಅವರು ಭ್ರಷ್ಟಾಚಾರ, ಅವ್ಯಹಾರಗಳಲ್ಲಿ ಭಾಗಿಯಾದ ಸಂಬಂಧ ಎಸಿಬಿಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ 2020ರ ನವೆಂಬರ್ 7ನೇ ತಾರೀಖಿನಂದು ಬೆಂಗಳೂರು, ಮೈಸೂರು ಹಾಗೂ ಉಡುಪಿ ಜಿಲ್ಲೆಯ ಒಟ್ಟು 7 ಸ್ಥಳಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ, ಹಲವಾರು ಅಕ್ರಮ ಆಸ್ತಿಗಳು ಪತ್ತೆಯಾಗಿತ್ತು
ಕೆಎಎಸ್ ಅಧಿಕಾರಿಯಾಗಿ 12 -13 ವರ್ಷ ಅನುಭವ ಹೊಂದಿರುವ ಸುಧಾ ಅವರ ನಿವಾಸದಿಂದ 3.7 ಕೆಜಿ ಚಿನ್ನ ಹಾಗೂ 10.5 ಕೆಜಿ ಬೆಳ್ಳಿ ವಸ್ತುಗಳನ್ನು ಹಾಗು ಬೆಂಗಳೂರು, ಉಡುಪಿ, ಮೈಸೂರು ಸೇರಿ ಒಟ್ಟು ಏಳು ಸ್ಥಳಗಳಲ್ಲಿ ದಾಳಿ ಮಾಡಲಾಗಿದ್ದು, ಈ ವೇಳೆ 36.89 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿತ್ತು.
ಬ್ಯಾಂಕ್ ಖಾತೆಯಲ್ಲಿ 3.5 ಕೋಟಿ ರೂ. ಠೇವಣಿ ಹಾಗೂ 20ಕ್ಕೂ ಹೆಚ್ಚು ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಸ್ಥಿರಾಸ್ತಿ ಕ್ರಯ ಪತ್ರಗಳು, ಜಿಪಿಎ ಕರಾರುಗಳು, ಖರೀದಿ ಒಪ್ಪಂದ ಸೇರಿದಂತೆ 200 ಆಸ್ತಿ ಪತ್ರಗಳು ಪತ್ತೆಯಾಗಿವೆ.
ಈ ನಡುವೆ ಸೀರಿಯಲ್ , ಸಿನಿಮಾಗಳಲ್ಲಿ ಅಪಾರ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದರು ಎಂಬ ಅಂಶವು ಬೆಳಕಿಗೆ ಬಂದಿತ್ತು. ಡಾ. ಸುಧಾ, ತನ್ನ ಪರಮಾಪ್ತೆ ಸ್ನೇಹಿತೆ ರೇಣುಕಾ ಹೆಸರಿನಲ್ಲಿ ಬೇನಾಮಿ ವಹಿವಾಟು ನಡೆಸಿರುವುದು ತನಿಖೆ ವೇಳೆ ತಿಳಿದು ಬಂದಿತ್ತು.