ಬೆಳ್ತಂಗಡಿ : ಕನ್ಯಾಡಿಯಿಂದ ಅಕ್ಕನ ಗಂಡನ ಜೊತೆ ಯುವತಿ ಪರಾರಿ ಪ್ರಕರಣ ಸುಖಾಂತ್ಯ ಕಂಡಿದೆ. ಇದೀಗ ಯುವತಿ ಮತ್ತೆ ಹೆತ್ತವರ ಮಡಿಲು ಸೇರಿದ್ದಾಳೆ.
ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದ ದೇರ್ಲಕ್ಕಿ ಮಹಮ್ಮದ್ ಎಂಬವರ ಹಿರಿಯ ಮಗಳ ಗಂಡ ಮುಸ್ತಫಾನ ಜೊತೆಗೆ ಪರಾರಿಯಾದ ಮಹಮ್ಮದ್ ರವರ ಕಿರಿಯ ಮಗಳು ರೈಹಾನ ಎಂಬಾಕೆ ಮಡಿಕೇರಿಯಲ್ಲಿ ಮುಸ್ತಫಾನ ಜೊತೆಗೆ ಪತ್ತೆಯಾಗಿದ್ದಾಳು. ಬೆಳ್ತಂಗಡಿ ಪೋಲಿಸರು ರೈಹಾನಳನ್ನು ಬೆಳ್ತಂಗಡಿ ನ್ಯಾಯದೀಶರ ಮುಂದೆ ಹಾಜರು ಪಡಿಸಿದಾಗ ತಂದೆ-ತಾಯಿಯ ಜೊತೆಗೆ ತೆರಳಲು ನಿರಾಕರಿಸಿದ್ದಳು. ಅಂತಿಮವಾಗಿ ರಿಮಾಂಡ್ ಹೋಂಗೆ ತೆರಳಲು ಆದೇಶಿಸಿದರು. ಬೆಳ್ತಂಗಡಿ ಪೋಲಿಸರು ಆಕೆಯನ್ನು ಮಂಗಳೂರಿನ ಜಪ್ಪಿನಮೊಗರುನಲ್ಲಿರುವ ರಿಮಾಂಡ್ ಹೋಂಗೆ ದಾಖಲಿಸಿದ್ದರು.
ಇದಾಗಿ ಎರಡೇ ದಿನಗಳಲ್ಲಿ ತನ್ನ ಮನಸ್ಸು ಬದಲಾಯಿಸಿದ ಯುವತಿ ತಾನು ತಂದೆ-ತಾಯಿಯ ಜೊತೆಗೆ ತೆರಳುವುದಾಗಿ ರಿಮಾಂಡ್ ಹೋಂ ನ ಮುಖ್ಯಸ್ಥರ ಮೂಲಕ ಬೆಳ್ತಂಗಡಿ ನ್ಯಾಯಾದೀಶರಿಗೆ ಮನವಿ ಸಲ್ಲಿಸಿದ್ದಳು. ಮನವಿಯನ್ನು ಪುರಸ್ಕರಿಸಿದ ಮಾನ್ಯ ನ್ಯಾಯಾಲಯ ಆಕೆಯನ್ನು ಹೆತ್ತವರ ಜೊತೆಗೆ ತೆರಳಲು ಶನಿವಾರ ಸಂಜೆ ಆದೇಶಿಸಿದೆ. ಅಂತಿಮವಾಗಿ ಆದಿತ್ಯವಾರ ಸಂಜೆ ರೈಹಾನ ಹೆತ್ತವರ ಮಡಿಲು ಸೇರಿದ್ದಾಳೆ. ಹೆತ್ತವರು ನಿಟ್ಟುಸಿರು ಬಿಟ್ಟಿದ್ದಾರೆ. ಹಲವಾರು ಟ್ವಿಸ್ಟ್ ಗಳ ಮೂಲಕ ಕ್ಷಣಕೊಂದು ತಿರುವು ಪಡೆದ ಪ್ರಕರಣ ತಾತ್ಕಾಲಿಕವಾಗಿ ಅಂತ್ಯ ಕಂಡಿದೆ.