ನವದೆಹಲಿ: ಸುಪ್ರೀಂಕೋರ್ಟ್ ನ 52ನೇ ಮುಖ್ಯ ನ್ಯಾಯಾಧೀಶರಾಗಿ (ಸಿಜೆಐ) ಜಸ್ಟೀಸ್ ಭೂಷಣ್ ರಾಮಕೃಷ್ಣ ಗವಾಯಿ ಅವರು ಮೇ 14 ಬುಧವಾರದಂದು ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಸಿಜೆಐ ಬಿ.ಆರ್.ಗವಾಯಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಜಸ್ಟೀಸ್ ಬಿ.ಆರ್.ಗವಾಯಿ ಅವರ ಹೆಸರನ್ನು ಸುಪ್ರೀಂಕೋರ್ಟ್ ಸಿಜೆಐ ಸಂಜೀವ್ ಖನ್ನಾ ಅವರಿಂದ ತೆರವಾದ ಸ್ಥಾನಕ್ಕೆ ಶಿಫಾರಸು ಮಾಡಲಾಗಿತ್ತು.
ಇನ್ನು ಪ್ರಮಾಣವಚನ ಸ್ವೀಕರಿಸಿದ ಬಿ.ಆರ್.ಗವಾಯಿ ಅವರಿಗೆ ರಾಷ್ಟ್ರಪತಿ ಮುರ್ಮು, ಉಪ ರಾಷ್ಟ್ರಪತಿ ಜಗ್ ದೀಪ್ ಧನ್ಕರ್, ಪ್ರಧಾನಮಂತ್ರಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಇತರ ಕೇಂದ್ರ ಸಚಿವರು ಅಭಿನಂದನೆ ಸಲ್ಲಿಸಿದರು.
ಸಮಾರಂಭದಲ್ಲಿ ನಿವೃತ್ತ ಸಿಜೆಐ ಸಂಜೀವ್ ಖನ್ನಾ ಉಪಸ್ಥಿತರಿದ್ದರು.
ಜಸ್ಟೀಸ್ ಬಿ.ಆರ್.ಗವಾಯಿ ಅವರು ಸುಪ್ರೀಂಕೋರ್ಟ್ ನ ಸಿಜೆಐ ಆಗಿ ಆರು ತಿಂಗಳ ಕಾಲ ಸೇವೆ ಸಲ್ಲಿಸಲಿದ್ದು, ನವೆಂಬರ್ ನಲ್ಲಿ ನಿವೃತ್ತಿಯಾಗಲಿದ್ದಾರೆ.