ಕಡಬ: ಪೆಟ್ರೋಲ್ ಬಂಕ್ವೊಂದರಲ್ಲಿ ಇಡಲಾಗಿದ್ದ ಜೇಸಿಬಿಯ ಬಕೇಟನ್ನು ಹಾಡಹಗಲೇ ಕಳವು ನಡೆಸಿ ಬಳಿಕ ಅದನ್ನು ಗುಜರಿಗೆ ಮಾರಾಟ ಮಾಡಿರುವ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಕಳವು ನಡೆಸಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಳಿಕ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿದ್ದಾರೆ. ಕಳವು ನಡೆಸಲು ಬಳಸಲಾಗಿದ್ದ ಆರೋಪಿಯ ರಿಕ್ಷಾ ಕಡಬ ಪೊಲೀಸರ ವಶದಲ್ಲಿದೆ.
ಕಡಬದ ಪೆಟ್ರೋಲ್ ಬಂಕ್ ಒಂದರಲ್ಲಿ, ಸದಾನಂದ ಎಂಬವರು ಜೇಸಿಬಿಯ ಬಕೇಟ್ನ್ನು ಇಟ್ಟಿದ್ದರು, ಆದರೇ ಜ.30ರಂದು ಜೆಸಿಬಿ ಬಕೇಟ್ ಕಾಣೆಯಾಗಿರುವ ಮಾಹಿತಿಯನ್ನು ಸದಾನಂದ ಅವರ ಜೆಸಿಬಿ ಆಪರೇಟರ್ ನೀಡಿದ್ದು, ಈ ಬಗ್ಗೆ ಸದಾನಂದ ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಸದಾನಂದರು ಪೆಟ್ರೋಲ್ ಬಂಕ್ನಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ವೀಕ್ಷಣೆ ಮಾಡಿದರೂ ಸ್ಪಷ್ಟವಾದ ಮಾಹಿತಿ ಸಿಕ್ಕಿರಲಿಲ್ಲ. ಬಳಿಕ ಜೇಸಿಬಿಯ ಮಾಲಕ ಸದಾನಂದರವರು ಕಡಬ ಮತ್ತು ಪಂಜದ ಗುಜರಿ ಅಂಗಡಿಯಲ್ಲಿ ವಿಚಾರಿಸಿದ್ದು, ಇ ವೇಳೆ ಪಂಜದ ಗುಜರಿ ಅಂಗಡಿಯಲ್ಲಿ ಸದಾನಂದ ಅವರ ಜೆಸಿಬಿಯ ಬಕೇಟ್ ಪತ್ತೆಯಾಗಿತ್ತು.
ಈ ಬಗ್ಗೆ, ಸದಾನಂದರವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಬಕೇಟ್ ಮಾರಾಟ ಮಾಡಿದವರಿಗೆ ಫೋನ್ ಮಾಡಿದರೂ ಅವರು ರಿಸೀವ್ ಮಾಡಿರಲಿಲ್ಲ, ಆದರೇ ಅಚಾನಕ್ ಆಗಿ ಅದೇ ವೇಳೆ, ಆರೋಪಿಗಳೇ ಬೇರೆ ಗುಜರಿ ವಸ್ತುಗಳನ್ನು, ಅಟೋದಲ್ಲಿ ತುಂಬಿಸಿಕೊಂಡು ಬರುತ್ತಿದ್ದರು. ಕೂಡಲೇ ಪೊಲೀಸರು ಅವರನ್ನು ಠಾಣೆಗೆ ತಂದು ವಿಚಾರಣೆ ನಡೆಸಿದ್ದು, ಬಳಿಕ ಮಾತುಕತೆ ನಡೆಸಿ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ.