ಅಂಕೋಲಾ: ಉತ್ತರಕನ್ನಡದ ಶಿರೂರಿನಲ್ಲಿ ಜುಲೈ 16 ರಂದು ಸಂಭವಿಸಿದ ಭೂಕುಸಿತದಲ್ಲಿ ಹಲವು ಜನ ಮೃತರಾಗಿದ್ದು, ಘಟನೆಯಲ್ಲಿ ಲಾರಿ ಸಮೇತ ಚಾಲಕ ಅರ್ಜುನ್ ಸೇರಿದಂತೆ ಮೂವರು ನಾಪತ್ತೆಯಾಗಿದ್ದರು. ಅವರ ಹುಡುಕಾಟ ಮುಂದುವರೆದಿದ್ದು, ಅದರಂತೆ ಇಂದು ಮಲ್ಪೆ ಈಶ್ವರ್ ತಂಡ ಶಿರೂರಿಗೆ ಬಂದಿದ್ದು ಕಾರ್ಯಾಚರಣೆ ನಡೆಸಲಿದ್ದಾರೆ ಎನ್ನಲಾಗಿದೆ.
ಈ ಕುರಿತಂತೆ ಪ್ರತಿಕ್ರಯಿಸಿದ ಈಶ್ವರ್ ಮಲ್ಪೆ, ಉತ್ತರಕನ್ನಡ ಎಸ್ಪಿ, ಡಿಎಸ್ಪಿ ಅವರು ಶುಕ್ರವಾರದಂದು ನನಗೆ ಕರೆ ಮಾಡಿದ್ದು, ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ಲಾರಿ ಹಾಗೂ ಚಾಲಕನ ಪತ್ತೆ ಕಾರ್ಯಾಚರಣೆ ನಡೆಸುವಂತೆ ತಿಳಿಸಿದ್ದರು. ಈ ನಿಟ್ಟಿನಲ್ಲಿ ಶನಿವಾರ ಮುಂಜಾನೆ ನಮ್ಮ ತಂಡದೊಂದಿಗೆ ಶಿರೂರಿಗೆ ಬಂದು ಕಾರ್ಯಾಚರಣೆ ಆರಂಭಿಸಿದ್ದೇವೆ. ಆದರೆ ಗಂಗಾವಳಿ ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿರುವುದರಿಂದ ನೀರಿನಾಳಕ್ಕೆ ಹೋಗಿ ಹುಡುಕಾಟ ನಡೆಸುವುದು ಸವಾಲಿನ ಕೆಲಸ. ಅಲ್ಲದೆ ಭೂ ಕುಸಿತದ ಸಂದರ್ಭ ಮನೆಯ ಅವಶೇಷಗಳು ನದಿಗೆ ಬಿದ್ದಿರುವುದರಿಂದ ನೀರಿನಾಳದಲ್ಲಿ ಕಬ್ಬಿಣದ ಶೀಟ್ ಗಳು ಜೊತೆಗೆ ಕೆಸರು ಮಿಶ್ರಿತ ನೀರು ಹರಿಯುದರಿಂದ ನೀರಿನಾಳದಲ್ಲಿರುವ ವಸ್ತುಗಳು ಕಣ್ಣಿಗೆ ಗೋಚರವಾಗುವುದಿಲ್ಲ ಬರಿ ಸ್ಪರ್ಶ ಜ್ಞಾನದಿಂದ ಯಾವ ವಸ್ತು ಎಂದು ಕಂಡುಹಿಡಿಯಬೇಕು ಹಾಗಾಗಿ ತುಂಬಾ ಸವಾಲಿನ ಕೆಲಸ ಎಂದು ಹೇಳಿದ್ದಾರೆ.
ಇನ್ನು ಸ್ಥಳದಲ್ಲಿ ಈಗಾಗಲೇ ಸೇನಾ ಪಡೆ, ಎನ್.ಡಿ.ಆರ್.ಎಫ್. ತಂಡ ಕಾರ್ಯಾಚರಣೆ ನಡೆಸಿದ್ದು ಅವರ ಮಾರ್ಗದರ್ಶನ ಪಡೆದು ನಾವು ಕಾರ್ಯಾಚರಣೆ ನಡೆಸುತ್ತೇವೆ. ಲಾರಿ ಇದೆ ಎನ್ನಲಾದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ ಲಾರಿ ಹಾಗೂ ಚಾಲಕ ಅರ್ಜುನ್ ಲಾರಿಯೊಳಗೆ ಇದ್ದಾರಾ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಇದರ ಜೊತೆಗೆ ಇನ್ನಿಬ್ಬರು ನಾಪತ್ತೆಯಾದವರ ಪತ್ತೆ ಕಾರ್ಯ ಆಗಬೇಕಿದೆ, ಕಾರ್ಯಾಚರಣೆ ಪೂರ್ಣಗೊಳ್ಳುವ ವರೆಗೆ ನಾವು ಇಲ್ಲಿಯೇ ಇರುತ್ತೇವೆ ಎಂದು ತಿಳಿಸಿದ್ದಾರೆ.