ಚಿಕ್ಕಮಗಳೂರು: ರಾಹುಲ್ ಗಾಂಧಿಯವರು ಅಮೆರಿಕಾದಲ್ಲಿ ಇಲಿಯಾಸ್ ಓಮರ್ ಎಂಬ ಭಾರತ ವಿರೋಧಿ ಸಂಸದರನ್ನು ಭೇಟಿಯಾಗಿದ್ದಾರೆ. ರಾಹುಲ್ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕರೋ, ಭಾರತ ವಿರೋಧಿ ನಾಯಕರೋ? ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದರು.
ಅವರು ಶನಿವಾರದಂದು ಚಿಕ್ಕಮಗಳೂರಿನಲ್ಲಿ ಮಾತನಾಡಿ, “ರಾಹುಲ್ ಗಾಂಧಿಯವರು ಅಮೆರಿಕಾದಲ್ಲಿ ಭಾರತ ವಿರೋಧಿಗಳನ್ನ ಭೇಟಿ ಮಾಡುತ್ತಾರೆ, ಅವರ ಜತೆ ಮಾತುಕತೆ ಮಾಡುತ್ತಾರೆ. ರಾಹುಲ್ ಗಾಂಧಿ ಭಾರತ ವಿರೋಧಿ ನಾಯಕರು ಎಂಬ ಅನುಮಾನ ಕಾಡುತ್ತಿದೆ. ಭಾರತಕ್ಕೆ ಚೀನಾ, ಪಾಕಿಸ್ತಾನ ವಿರೋಧಿ ಆದರೆ, ರಾಹುಲ್ ಹೇಳಿಕೆ, ಚಟುವಟಿಕೆ ಭಾರತಕ್ಕೆ ವಿರೋಧಿಯಂತಿದೆ ಎಂದರು.
ಇನ್ನು ಇದೇ ಸಂದರ್ಭದಲ್ಲಿ ಅವರು ನಾಗಮಂಗಲ ಗಲಭೆ ಪ್ರಕರಣ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, “ಯಾವ ಮುಸ್ಲಿಂ ಮೇಲು ಗಣಪತಿ ಮೆರವಣಿಗೆಯಲ್ಲಿದ್ದವರು ತಲ್ವಾರ್ ಝಳಪಿಸಿಲ್ಲ, ಮಸೀದಿ ಮೇಲೆ ಕಲ್ಲು ತೂರಿಲ್ಲ. ತಲ್ವಾರ್ ಝಳಪಿಸಿದ್ದು ಕಲ್ಲು ತೂರಿದ್ದು ಮುಸ್ಲಿಂ ಮತಾಂಧರು. ಕಲ್ಲು ತೂರಿದ ಮತಾಂಧರ ಮೇಲೆ ಕ್ರಮ ಆಗಬೇಕಿತ್ತು. ಈ ಹೇಡಿ ಸರ್ಕಾರ ಗಣಪತಿ ಕೂರಿಸಿದವರನ್ನೇ ಎ1 ಮಾಡಿದೆ ಎಂದರು. 1 ರಿಂದ 18 ಆರೋಪಿಗಳು ಶಾಂತಿಯುತ ಮೆರವಣಿಗೆ ಮಾಡಿದವರು. ಓಲೈಕೆ ರಾಜನೀತಿ ಪರಿಣಾಮ ಮತಾಂಧತೆಗೆ ಕೊನೆ ಇಲ್ಲದಂತಾಗಿದೆ,” ಎಂದು ದೂರಿದರು.
ಗಣಪತಿಯ ಮೆರವಣಿಗೆ ಬರಬಾರದು ಎನ್ನಲು ಅವರು ಯಾರು? ಮೊದಲು ಅವರನ್ನು ಒದ್ದು ಒಳಗೆ ಹಾಕಬೇಕಿತ್ತು. ಸರ್ಕಾರ ಗಣಪತಿ ಕೂರಿಸಿದವರನ್ನು ಎ1 ಮಾಡಿದೆ. ನಿಜಕ್ಕೂ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಸರ್ಕಾರದ ವಿರುದ್ದ ಸಿ.ಟಿ ರವಿ ಅವರು ಆಕ್ರೋಶ ವ್ಯಕ್ತಪಡಿಸಿದರು.