ಬೆಳ್ತಂಗಡಿ : ಧರ್ಮಸ್ಥಳ ಪೊಲೀಸರಿಗೆ ಐದು ಜನ ಆರೋಪಿಗಳಿಂದ 42 ಸಿಮ್ ಕಾರ್ಡ್ ಪತ್ತೆಯಾಗಿರುವ ಪ್ರಕರಣ ಸಂಬಂಧ ಬಂಟ್ವಾಳ ಉಪವಿಭಾಗ ಡಿವೈಎಸ್ಪಿ ತಂಡದ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡು ಚುರುಕು ಮಾಡಿದ್ದು. ಪ್ರಕರಣದ ಇಂಚಿಂಚು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದ ನುರಿತ ಕ್ರೈಂ ಸಿಬ್ಬಂದಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ದಿನಗಳಿಂದ ತನಿಖೆ ನಡೆಸುತ್ತಿದ್ದು, ಆರೋಪಿಗಳಿಗೆ 42 ಸಿಮ್ ಗೆ ದಾಖಲೆ ನೀಡಿದ ಎಲ್ಲಾ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ತನಿಖೆ ನಡೆಸುತ್ತಿದ್ದಾರೆ.
ಆಧಾರ್ ಕಾರ್ಡ್ ನೀಡಿದವರ ತನಿಖೆ: ಸಿಮ್ ಕಾರ್ಡ್ ಪತ್ತೆಯಾದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ಒಂದು ತಂಡ ಬೆಳ್ತಂಗಡಿ ಏರ್ ಟೆಲ್ ಕಚೇರಿಗೆ ಹೋಗಿ ಸಿಮ್ ನೀಡಲು ಅಧಾರ್ ಕಾರ್ಡ್ ದಾಖಲೆ ಪರಿಶೀಲನೆ ನಡೆಸಿ ಅವರ ವಿಳಾಸ ಪತ್ತೆ ಮಾಡಿ ಅವರನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ಕರೆದು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಆರೋಪಿಗಳ ಬ್ಯಾಂಕ್ ಖಾತೆಯನ್ನು ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಆರೋಪಿಗಳ ತೀವ್ರ ವಿಚಾರಣೆ: ಐದು ಜನ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದ್ದರಿಂದ ತನಿಖಾಧಿಕಾರಿಗಳು ಠಾಣೆಗೆ ವಿಚಾರಣೆಗೆ ಕರೆದಾಗ ಹಾಜರಾಗಲು ಸೂಚನೆ ನೀಡಿದ್ದು. ಅದರಂತೆ ಕಳೆದ ಎರಡು ದಿನದಿಂದ ಐದು ಜನ ಠಾಣೆಗೆ ಹಾಜರಾಗಿ ತನಿಖಾಧಿಕಾರಿಗಳ ವಿಚಾರಣೆಗೆ ಬರುತ್ತಿದ್ದಾರೆ.
ವಿದೇಶಿ ಷೇರು ಮಾರುಕಟ್ಟೆ ವ್ಯವಹಾರ ಜಾಲ ದೃಢ:
ಆರೋಪಿಗಳಲ್ಲಿ ಅಕ್ಬರ್ ಆಲಿ ದುಬೈ ನಲ್ಲಿ ವಿದೇಶಿ ಮಾರುಕಟ್ಟೆಯ ವ್ಯವಹಾರದಲ್ಲಿದ್ದು. ಈ ದಂಧೆ ಭಾರತದಲ್ಲಿ ನಿಷೇಧಿಸಲಾದ ಷೇರು ಮಾರುಕಟ್ಟೆಯಾಗಿದೆ ಎನ್ನಲಾಗಿದೆ. ಭಾರತದಿಂದ ಸಿಮ್ ಕಾರ್ಡ್ ಪಡೆದುಕೊಂಡು ಹೋಗಿ ವಿದೇಶದಲ್ಲಿ ಈ ಕರೆನ್ಸಿ ದಂಧೆಯಲ್ಲಿ ತೊಡಗಿ ವಿವಿಧ ಸಿಮ್ ಉಪಯೋಗಿಸಿ ಯುಪಿಐ ಮೂಲಕ ಭಾರತಕ್ಕೆ ಖಾತೆಗೆ ಹಣ ವರ್ಗಾವಣೆ ಮಾಡಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದಿದೆ. ಈ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಂಡಿದೆ.