ಬೆಂಗಳೂರು: ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ ಸಂಪೂರ್ಣ ಲಸಿಕಾಕರಣ ಉದ್ದೇಶದ ಇಂದ್ರಧನುಷ್ (Indradhanush Vaccine) 4.0 ಅಭಿಯಾನ 11 ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿದೆ. ಸರ್ಕಾರ ವಯೋಮಾನ ಆಧಾರಿತವಾಗಿ ಸೂಚಿಸಿರುವ ಲಸಿಕೆಗಳನ್ನು ಕಾಲಕಾಲಕ್ಕೆ ಪಡೆಯದಿರುವ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ.
ಸೋಮವಾರ ಬೆಂಗಳೂರಿನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜ್ನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ ಅವರು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಬಾಗಲಕೋಟೆ, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗದಗ, ಕಲಬುರಗಿ, ದಾವಣಗೆರೆ, ಬಿಬಿಎಂಪಿ ಮತ್ತು ವಿಜಯಪುರ ಜಿಲ್ಲೆಗಳನ್ನು ಹಾಗೂ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಈ ಸಲಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಅಭಿಯಾನ 2022ರ ಮೇ ತಿಂಗಳವರೆಗೆ ನಡೆಯಲಿದ್ದು, ಪ್ರತಿ ತಿಂಗಳಲ್ಲಿ ಒಂದು ವಾರ ಅಭಿಯಾನ ಚಾಲ್ತಿಯಲ್ಲಿರಲಿದೆ. ಮಾರ್ಚ್ 7ರಿಂದ ಒಂದು ವಾರ, ಏಪ್ರಿಲ್ 4ರಿಂದ ಒಂದು ವಾರ ಮತ್ತು ಮೇ 9ರಿಂದ ಒಂದು ವಾರ ಈ ಅಭಿಯಾನ ನಡೆಯಲಿದೆ.