ರಾಮೇಶ್ವರ : ಶನಿವಾರ ತಡರಾತ್ರಿ ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿಗಳು ಭಾರತೀಯ ಮೀನುಗಾರಿಕಾ ದೋಣಿಗಳ ಮೇಲೆ ಕಲ್ಲು ತೂರಾಟ ನಡೆಸಿವೆ ಎಂದು ವರದಿಯಾಗಿದೆ.
ಘಟನೆಯಲ್ಲಿ 60 ದೋಣಿಗಳಿಗೆ ಹಾನಿಯುಂಟಾಗಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ ಎಂದು ಹೇಳಲಾಗಿದೆ.ಕಳೆದ ರಾತ್ರಿ ಕಟ್ಚತೀವು ಬಳಿ ಮೀನು ಹಿಡಿಯುತ್ತಿರುವಾಗ, ಸುಮಾರು 25 ದೋಣಿಗಳ ಫಿಶಿಂಗ್ ನೆಟ್ಗಳನ್ನೂ ನೌಕಾಪಡೆಯ ಸಿಬ್ಬಂದಿ ಹಾನಿಗೊಳಿಸಿದ್ದಾರೆ. ಐದು ವೆಸೆಲ್ಗಳಲ್ಲಿ ಬಂದು ಕಲ್ಲು ತೂರಿದ್ದಾರೆ. ಆದರೆ ಈ ಘಟನೆಯಲ್ಲಿ ಯಾವ ಮೀನುಗಾರರಿಗೂ ಏಟು ಬಿದ್ದಿಲ್ಲ ಎಂದು ಮೀನುಗಾರರು ದೂರು ಸಲ್ಲಿಸಿರುವುದಾಗಿ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೀನುಗಾರರ ಸಂಘದ ಪ್ರತಿನಿಧಿ ಎಸ್. ಎಮೆರಿಟ್ ಪ್ರತಿಕ್ರಿಯಿಸಿ, ಮೀನುಗಾರಿಕೆಗೆಂದು ತೆರಳಿದ್ದ 556 ಬೋಟ್ ಗಳಲ್ಲಿ ಕೆಲವು ಶ್ರೀಲಂಕಾ ನೌಕಾ ಪಡೆಯ ದಾಳಿಗೆ ಗುರಿಯಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯ ಪ್ರವೇಶಿಸಿ, ಈ ರೀತಿಯ ಘಟನೆಗಳು ಪುನಃ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.


