Friday, June 27, 2025
Homeತಾಜಾ ಸುದ್ದಿ88ನೇ ಭಾರತೀಯ ವಾಯುಪಡೆ ದಿನ : ಹಿಂಡನ್ ವಾಯುನೆಲೆಯಲ್ಲಿ ಕಳೆಕಟ್ಟಿದ ಸಂಭ್ರಮ, ವೀರ ಯೋಧರಿಗೆ ಶುಭಾಶಯ...

88ನೇ ಭಾರತೀಯ ವಾಯುಪಡೆ ದಿನ : ಹಿಂಡನ್ ವಾಯುನೆಲೆಯಲ್ಲಿ ಕಳೆಕಟ್ಟಿದ ಸಂಭ್ರಮ, ವೀರ ಯೋಧರಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್

spot_img
- Advertisement -
- Advertisement -

ನವದೆಹಲಿ: 88ನೇ ಭಾರತೀಯ ವಾಯುಸೇನಾ ದಿನ ಹಿನ್ನಲೆಯಲ್ಲಿ ವಾಯುಪಡೆಯ ಧೀರ ಯೋಧರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗುರುವಾರ ಶುಭಾಶಯಗಳನ್ನು ಕೋರಿದ್ದಾರೆ.
ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ವಾಯುಪಡೆಯ ದಿನದಂದು ಭಾರತೀಯ ವಾಯುಸೇನೆಯಯ ಎಲ್ಲಾ ವೀರ ಯೋಧರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ನೀವು ದೇಶದ ಆಗಸವನ್ನು ಸುರಕ್ಷಿತವಾಗಿರಿಸುವುದಲ್ಲದೆ, ವಿಪತ್ತು ಸಮಯದಲ್ಲಿ ಮಾನವೀಯತೆಯ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತೀರಿ. ಭಾರತಾಂಬೆ ರಕ್ಷಿಸಲು ನಿಮ್ಮ ಧೈರ್ಯ, ಶೌರ್ಯ ಮತ್ತು ಸಮರ್ಪಣೆ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ.


ರಾಷ್ಟ್ರಪತಿ ರಮಾನಾಥ್ ಕೊವಿಂದ್ ಅವರು ಕೂಡ ವೀರ ಯೋಧರಿಗೆ ಶುಭಾಶಗಳನ್ನು ಕೋರಿದ್ದು, ನಮ್ಮ ವಾಯುಪಡೆಯ ಯೋಧರು, ಮಾಜಿ ಯೋಧರು ಮತ್ತು ಭಾರತೀಯ ವಾಯುಪಡೆಯ ಕುಟುಂಬಸ್ಥರನ್ನು ನಾವು ಹೆಮ್ಮೆಯಿಂದ ಗೌರವಿಸುತ್ತೇವೆ. ನಮ್ಮ ಆಕಾಶವನ್ನು ಭದ್ರಪಡಿಸುವಲ್ಲಿ ಮತ್ತು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರದಲ್ಲಿ ನಾಗರಿಕರಿಗೆ ಸಹಾಯ ಮಾಡುವಲ್ಲಿ ಐಎಎಫ್‌ನ ಕೊಡುಗೆ ಅಪಾರವಾದದು ಎಂದು ಹೇಳಿದ್ದಾರೆ.

ಹಿಂಡನ್ ವಾಯುನೆಲೆಯಲ್ಲಿ ಕಳೆಕಟ್ಟಿದ ಸಂಭ್ರಮ:
ಭಾರತೀಯ ವಾಯುಸೇನೆ 88ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದ್ದು, ಉತ್ತರಪ್ರದೇಶದ ಘಾಜಿಯಾಬಾದ್’ನಲ್ಲಿರುವ ಹಿಂಡನ್ ವಾಯುನೆಲೆಯಲ್ಲಿ ವಿಶೇಷ ಪರೇಡ್ ನಡೆಯುತ್ತಿದೆ. ವಿಶೇಷ ಪರೇಡ್ ನಲ್ಲಿ ಭಾರತೀಯ ಯೋಧರು ತಮ್ಮ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ.
ಈ ವರ್ಷದ ವಿಶೇಷ ಪರೇಡ್’ನ ಪ್ರಮುಖ ಆಕರ್ಷಣೆ ರಫೇಲ್ ಯುದ್ಧ ವಿಮಾನ ಆಗಿರಲಿದ್ದು, ರೋಮಾಂಚನಕಾರಿ ದೃಶ್ಯ ವೈಭವ ಎಲ್ಲರ ಕಣ್ಮನ ಸೆಳೆಯುತ್ತಿದೆ.


ಕಾರ್ಯಕ್ರಮದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಮುಖ್ಯಸ್ಥರಾದ ಜನರಲ್ ಮನೋಜ್ ಮುಕುಂದ್ ನರಾವಣೆ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬಿರ್ ಸಿಂಗ್ ಅವರು ಭಾಗಿಯಾಗಿದ್ದಾರೆ.
ಇದಕ್ಕೂ ಮುನ್ನ ವಾಯುಪಡೆಯ ಮುಖ್ಯಸ್ಥರಾದ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ವಾಯುಪಡೆ ದಿನದ ಮೆರವಣಿಗೆಯನ್ನು ಪರಿಶೀಲನೆ ನಡೆಸಿದರು.
1932, ಅ. 8ರಂದು ಭಾರತೀಯ ವಾಯು ಪಡೆಯನ್ನು ಸ್ಥಾಪಿಸಲಾಯಿತು. ಅಂದಿನಿಂದ ಪ್ರತೀ ವರ್ಷ ಅಕ್ಟೋಬರ್‌ 8ರಂದು ಹಲವು ಯುದ್ಧಗಳಲ್ಲಿ ಭಾರತೀಯ ವಾಯುಸೇನೆಯು ಸಲ್ಲಿಸಿದ ಅನುಪಮ ಸೇವೆಯನ್ನು ಸ್ಮರಿಸುವ ಹಾಗೂ ವೀರ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಭಾರತೀಯ ವಾಯುಪಡೆ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ವಿಶ್ವದಲ್ಲಿ ಅತೀ ದೊಡ್ಡ ವಾಯು ಪಡೆಯನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕ, ರಷ್ಯಾ ಮತ್ತು ಚೀನದ ಅನಂತರದ ಸ್ಥಾನದಲ್ಲಿ ಭಾರತ ಇದೆ. ಮಾತ್ರವಲ್ಲದೇ ಜಗತ್ತಿನ ಶಕ್ತಿಶಾಲಿ ವಾಯು ಸೇನೆಗಳಲ್ಲಿ ಭಾರತೀಯ ವಾಯುಪಡೆಯೂ ಒಂದಾಗಿದೆ.

1933ರ ಎ.1ರಂದು ಮೊದಲ ಯುದ್ಧ ವಿಮಾನ ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಗಿತ್ತು. ಅಂದು ಬ್ರಿಟಿಷ್‌ ವಾಯುಪಡೆಯಿಂದ ತರಬೇತಿ ಪಡೆದ 6 ಮಂದಿ ಅಧಿಕಾರಿಗಳು ಮತ್ತು 19 ಸೈನಿಕರಿದ್ದರು. ಜತೆಗೆ 4 ವಿಮಾನಗಳಿದ್ದವು. ಆಗ ವಾಯುಪಡೆಯನ್ನು “ರಾಯಲ್‌ ಇಂಡಿಯನ್‌ ಏರ್‌ಫೋರ್ಸ್‌’ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರದ ಬಳಿಕ “ಇಂಡಿಯನ್‌ ಏರ್‌ಫೋರ್ಸ್‌’ ಎಂದು ಮರುನಾಮಕರಣ ಮಾಡಲಾಯಿತು.
ನೆರೆಯ ದೇಶಗಳಾದ ಪಾಕಿಸ್ಥಾನ ಮತ್ತು ಚೀನದೊಂದಿಗೆ ನಡೆದ ಯುದ್ಧದಲ್ಲಿ ನಮ್ಮ ವಾಯುಪಡೆ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸಿದೆ. ವಾಯುಪಡೆಯು ನಡೆಸಿದ ಸೇನಾ ಕಾರ್ಯಾಚರಣೆಗಳಲ್ಲಿ ಆಪರೇಷನ್‌ ವಿಜಯ., ಆಪರೇಷನ್‌ ಮೇಘದೂತ್‌, ಆಪರೇಷನ್‌ ಕ್ಯಾಕ್ಟಸ್‌, ಆಪರೇಷನ್‌ ಪೂಮಲೈ, ಆಪರೇಷನ್‌ ರಾಹತ್‌ ಅತ್ಯಂತ ಪ್ರಮುಖವಾಗಿವೆ. ಇದಲ್ಲದೆ ದೇಶದಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದಾಗ, ಭಯೋತ್ಪಾದಕರ ದಾಳಿ ನಡೆದಾಗ, ಗಲಭೆಗಳು ನಡೆದಾಗ ಪ್ರಾಣಾಪಾಯದಲ್ಲಿರುವ ಜನರನ್ನು ರಕ್ಷಿಸುವ ಕಾರ್ಯವನ್ನೂ ವಾಯು ಸೇನೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.

- Advertisement -
spot_img

Latest News

error: Content is protected !!