ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತೆ, ಸದ್ಯ ಜೈಲಿನಲ್ಲಿರುವ ವಿ.ಕೆ.ಶಶಿಕಲಾ ನಟರಾಜನ್ ಅವರ 2000 ಕೋಟಿ ರೂ.ಮೌಲ್ಯದ ಸ್ವತ್ತನ್ನು ಆದಾಯ ತೆರಿಗೆ ಇಲಾಖೆ ಇಂದು ಮುಟ್ಟುಗೋಲು ಹಾಕಿಕೊಂಡಿದೆ.
ಬೇನಾಮಿ ಆಸ್ತಿ ತಡೆ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದ್ದು, ಸಿರುಥಾವೂರ್ ಮತ್ತು ಕೊಡನಾಡುವಿನಲ್ಲಿರುವ 300 ಕೋಟಿ ರೂ.ಮೌಲ್ಯದ ಆಸ್ತಿಯೂ ಜಪ್ತಿ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದ ಎಲ್ಲಾ ಆಸ್ತಿಗಳು ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಹೆಸರಿನಲ್ಲಿಯೇ ಇದ್ದವು ಎಂದು ತಿಳಿದು ಬಂದಿದೆ.
ಐಟಿ ಇಲಾಖೆಯ ಬೇನಾಮಿ ನಿಷೇಧ ದಳ ಜಪ್ತಿ ಮಾಡಿದ ಆಸ್ತಿಗಳ ಮೇಲೆ ಮುಟ್ಟುಗೋಲು ನೋಟಿಸ್ ಹಾಕಲಾಗಿದ್ದು, ಒಟ್ಟಾರೆ 2,000 ಕೋಟಿ ರೂ.ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ ಎಂದು ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ, ನಾಲ್ಕು ವರ್ಷಗಳ ಜೈಲು ಶಿಕ್ಷೆ ಮುಗಿಸಿ ಬಿಡುಗಡೆಯಾದ ನಂತರ ವಾಸವಾಗಿರಬೇಕೆಂದುಕೊಂಡಿದ್ದ ಬಂಗಲೆಯನ್ನು ಕೂಡಾ ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.