ಮಂಗಳೂರು: ನಗರದ ಹೊರವಲಯದ ಬೆಂಗ್ರೆಯ ಬಳಿ ಸರಕಾರಿ ಜಾಗದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ. ಮೂರ್ನಾಲ್ಕು ತಿಂಗಳ ಹಿಂದಿನಿಂದಲೇ ಇಲ್ಲಿಂದ ಯಾರೋ ಕೆಲವರು ಮರಳು ಒಯ್ಯುತ್ತಿದ್ದಾರೆ. ರಾತ್ರಿ ಜೆಸಿಬಿ ಹಾಗೂ ಟಿಪ್ಪರ್ ಬಳಸಿ ಮರಳು ಕೊಂಡೊಯ್ಯಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ತೋಟಬೆಂಗ್ರೆಯ ಹಿಂದೂ ರುದ್ರಭೂಮಿಯ ಬಳಿ ಸುಮಾರು 6 ಎಕ್ರೆ ಮೀನುಗಾರಿಕಾ ಇಲಾಖೆಗೆ ಬಂದರು ಇಲಾಖೆಯಿಂದ ಹಸ್ತಾಂತರವಾಗಿದೆ. ಜೆಟ್ಟಿ ನಿರ್ಮಾಣ ಉದ್ದೇಶಕ್ಕೆ ಇದನ್ನು ನೀಡಲಾಗಿದ್ದು, ಬಾಕಿ ಉಳಿದ ಜಾಗದಲ್ಲಿ ಹಾಗೆಯೇ ಎಷ್ಟೋ ವರ್ಷಗಳಿಂದ ಮರಳು ಇದೆ. ಅದನ್ನು ತೆರವು ಮಾಡುವಂತಿಲ್ಲ. ಆದರೆ ಕೆಲವರು ಇಲ್ಲಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ. ಈ ರೀತಿ ಮರಳು ತೆಗೆದ ಕಾರಣ ಸಮತಟ್ಟಾಗಿರುವ ಜಾಗದಲ್ಲಿ ಐದಾರು ಅಡಿ ಆಳದ ಕುಳಿಗಳು ನಿರ್ಮಾಣಗೊಂಡಿದ್ದು ಅಪಾಯಕಾರಿಯಾಗಿದೆ ಎನ್ನುವುದು ಸ್ಥಳೀಯರ ದೂರು. ಈ ಕುರಿತು ಸ್ಥಳೀಯರು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಿಆರ್ಝಡ್ ಇಲಾಖೆಗೆ ಮೌಖೀಕ ದೂರು ನೀಡಿದ್ದಾರೆ.
ಈ ಕುರಿತಂತೆ ಗಣಿ ಇಲಾಖೆ ಹಿರಿಯ ಜಿಯೊಲಜಿಸ್ಟ್ ಪ್ರತಿಕ್ರಿಯಿಸಿದ್ದು, ‘ಮೌಖಿಕವಾಗಿ ದೂರು ಕೊಟ್ಟು ತಕ್ಷಣ ಬರಬೇಕೆಂದರೆ ಕಷ್ಟವಾಗುತ್ತದೆ, ನಾವು ಬೇರೆ ಕೆಲಸದಲ್ಲಿರುತ್ತೇವೆ, ಆದರೆ ಲಿಖಿತವಾಗಿ ದೂರು ಕೊಟ್ಟರೆ ಪರಿಶೀಲಿಸಿ ಕ್ರಮ ಕೈಗೊಳ್ಳಬಹುದು,’ ಎಂದು ತಿಳಿಸಿದ್ದಾರೆ.