ಪುತ್ತೂರು: ತಾಲ್ಲೂಕಿನ ಕೆಯ್ಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಎರಡು ನಳ್ಳಿ ನೀರಿನ ಸಂಪರ್ಕ ಪಡೆದುಕೊಂಡಿರುವ ಆರೋಪದ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅಕ್ರಮವಾಗಿ ಎರಡು ನಳ್ಳಿ ನೀರಿನ ಸಂಪರ್ಕ ಹೊಂದಿರುವ ಮನೆಗಳಿಗೆ ದಾಳಿ ನಡೆಸಿ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ.
ಗ್ರಾಮ ಪಂಚಾಯಿತಿ ಸಭೆಯಲ್ಲಿ ನೀರನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಆರೋಪ ವ್ಯಕ್ತವಾಗಿದ್ದರಿಂದ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ದಿಢೀರ್ ದಾಳಿ ನಡೆಸಿ, ವಾರದೊಳಗೆ ಅಕ್ರಮ ನಳ್ಳಿ ಸಂಪರ್ಕವನ್ನು ಕಡಿತಗೊಳಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ನೀರು ಬಳಕೆ ಮತ್ತು ಬಿಲ್ ಪಾವತಿಯ ಕುರಿತು ಮನೆ ಮನೆಗೆ ಕೆಯ್ಯೂರು ಗ್ರಾಮದ ದೇವಿನಗರ ಜನತಾ ಕಾಲೊನಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್ಕುಮಾರ್ ಮಾಡಾವು, ಉಪಾಧ್ಯಕ್ಷೆ ಸುಮಿತ್ರಾ, ಸದಸ್ಯರಾದ ಜಯಂತಿ ಎಸ್ ಭಂಡಾರಿ, ಜಯಂತ ಪೂಜಾರಿ ಕೆಂಗುಡೇಲು, ಪಿಡಿಒ ನಮಿತಾ ಎ.ಕೆ., ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಪಂಚಾಯಿತಿ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕೆಲವು ಮನೆಗಳಲ್ಲಿ ಗ್ರಾಮ ಪಂಚಾಯಿತಿಯಿಂದ ನೀಡಲಾದ ಮತ್ತು ಹೊಸದಾಗಿ ಜೆಜೆಎಂ ಯೋಜನೆಯಡಿ ಪಡೆದುಕೊಂಡಿರುವ ನಳ್ಳಿನೀರಿನ ಸಂಪರ್ಕ, ಅಕ್ರಮ ನಳ್ಳಿ ಸಂಪರ್ಕಗಳೂ ಪತ್ತೆಯಾಗಿವೆ. ಕಾಲೊನಿಯ ಸುಮಾರು 30 ಮನೆಗಳಲ್ಲಿ ಪರಿಶೀಲನೆ ನಡೆಸಲಾಯಿತು. ನೀರಿನ ಶುಲ್ಕ ಪಾವತಿಸದವರಿಗೆ ನೋಟಿಸು ನೀಡಿ, ಕೂಡಲೇ ಪಾವತಿಸುವಂತೆ ಸೂಚನೆ ನೀಡಲಾಯಿತು. ಶುಲ್ಕ ಪಾವತಿಸದವರ ನಳ್ಳಿ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಸಲಾಯಿತು. ಎರಡು ನಳ್ಳಿ ನೀರು ಸಂಪರ್ಕ ಹೊಂದಿದವರು ಕಡ್ಡಾಯವಾಗಿ ವಾರದೊಳಗೆ ಆ ಪೈಕಿ ಒಂದನ್ನು ತೆಗೆಯಬೇಕು ಎಂದು ಸೂಚಿಸಲಾಯಿತು. ಗ್ರಾಮ ಪಂಚಾಯಿತಿ ಸಿಬ್ಬಂದಿ ಧರ್ಮಣ್ಣ, ಪಂಪ್ ಚಾಲಕ ಜನಾರ್ದನ ಪಾಲ್ಗೊಂಡಿದ್ದರು.