ಕಾರ್ಕಳ: ಪಿಎಸ್ ಐ ನೇಮಕ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ ಶಾಸಕ ಪ್ರಿಯಾಂಕ ಖರ್ಗೆ ಅವರನ್ನು ತನಿಖೆಗೆ ಒಳಪಡಿಸಿ ಎಂದು ಸಚಿವ ಸುನಿಲ್ ಕುಮಾರ್ ಅವರು ಹೇಳಿಕೆ ನೀಡಿದ್ರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜರವರು ಸಿ.ಐ.ಡಿ ಪೊಲೀಸರು ನೋಟಿಸ್ ನೀಡಿರುವುದು ಭ್ರಷ್ಟಾಚಾರದ ವಿರುದ್ಧ ದನಿಯೆತ್ತುವವರ ವಿರುದ್ಧವೇ ಎಂದು ಹೇಳಿದ್ದಾರೆ. ತಮ್ಮ ಅಧೀನದಲ್ಲಿರುವ ತನಿಖಾ ಸಂಸ್ಥೆಗಳ ಮೂಲಕ ಧ್ವನಿಯನ್ನು ಅಡಗಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಗರಣ ಬಯಲಿಗೆ ಬಂದ ಕೂಡಲೇ ಮಾಧ್ಯಮಗಳಲ್ಲಿ ಹೆಸರು ಕೇಳಿಬಂದ ಬಿಜೆಪಿ ನಾಯಕಿ ತಲೆಮರೆಸಿಕೊಂಡು ಕೆಲವು ದಿನಗಳಾದರೂ ಬಂಧಿಸಲು ಆಗದ ಸರ್ಕಾರ, ಧ್ವನಿಯೆತ್ತಿದವರಿಗೆ ನೋಟಿಸ್ ನೀಡುವ ಮೂಲಕ ಭ್ರಷ್ಟಾಚಾರಿಗಳನ್ನು ರಕ್ಷಿಸಲು ನೋಡುತ್ತಿದೆ ಎಂದು ಅನಿತಾ ಹೇಳಿದ್ದಾರೆ.
ಹಾಗೆಯೇ ಪ್ರಿಯಾಂಕ್ ಖರ್ಗೆಯವರನ್ನು ತನಿಖೆಗೆ ಒಳಪಡಿಸಬೇಕು ಅಂತ ಹೇಳುವ ಸುನಿಲ್ ಕುಮಾರ್ ಹೆಸರು ಕಾರ್ಕಳದಲ್ಲಿ ನಡೆದ ಕೆಲವು ಕಾಮಗಾರಿಗಳ ಭ್ರಷ್ಟಾಚಾರದಲ್ಲಿ ಕೇಳಿಬಂದಿದೆ. ತನಿಖೆ ನಡೆಸುವುದಾದರೆ ಕಾರ್ಕಳದಿಂದ ನಡೆಸಬೇಕು ಎಂದು ಅನಿತಾ ಡಿಸೋಜಾರವರು ಒತ್ತಾಯಿಸಿದ್ದಾರೆ.