ಹೈದರಾಬಾದ್: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹೈದರಾಬಾದ್ ತತ್ತರಿಸಿ ಹೋಗಿದೆ. ಪ್ರವಾಹದಲ್ಲಿ ಸಿಲುಕಿದವರ ಪಾಡು ಹೇಳ ತೀರದಾಗಿದೆ. ಈಗಾಗಲೇ ಅನೇಕರನ್ನು ವರುಣ ಬಲಿ ಪಡೆದಿದ್ದಾನೆ. ಪ್ರವಾಹದಲ್ಲಿ ಕಾರು ಸಮೇತ ವ್ಯಕ್ತಿಯೊಬ್ಬ ಕೊಚ್ಚಿ ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ಆತನ ಗೆಳೆಯನೊಬ್ಬನಿಗೆ ಕೊನೆ ಘಳಿಗೆಯಲ್ಲಿ ಸಹಾಯಕ್ಕಾಗಿ ಮಾಡಿದ ಕರೆ ಕಣ್ಣೀರು ತರಿಸುವಂತಿದೆ.
ವೆಂಕಟೇಶ್ ಗೌಡ ಎಂಬಾತ ಕಾರು ಸಮೇತ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ. ಈ ವೇಳೆ ಕೊನೆಯ ಬಾರಿಗೆ ತನ್ನ ಸ್ನೇಹಿತನಿಗೆ ಕರೆ ಮಾಡಿದ್ದ ವೆಂಕಟೇಶ್, ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರು ಮರವೊಂದಕ್ಕೆ ಸಿಲುಕಿಕೊಂಡಿದೆ. ಸಹಾಯಕ್ಕಾಗಿ ಯಾರನ್ನಾದರೂ ಕಳುಹಿಸು, ನೀರು ತುಂಬಿಕೊಳ್ಳುತ್ತಾ ಕಾರಿನ ಟೈರ್ಗಳು ಮೇಲೆ ಬರುತ್ತಿದೆ ಎಂದು ಆತಂಕದ ಧ್ವನಿಯಲ್ಲಿ ಸ್ನೇಹಿತನ ಬಳಿ ಮಾತನಾಡಿದ್ದಾನೆ
ಇತ್ತ ವೆಂಕಟೇಶ್ ಧ್ವನಿ ಕೇಳಿದ ಆತನ ಸ್ನೇಹಿತ ಭಯದಿಂದಲೇ ಹೇಗಾದರೂ ಮಾಡಿ ಪಕ್ಕದಲ್ಲಿ ಇರುವ ಕಾಂಪೌಂಡ್ ಗೋಡೆ ಅಥವಾ ಮರವನ್ನು ಏರು ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಮರು ಮಾತನಾಡಿದ ವೆಂಕಟೇಶ್, ಹೌದು ನಾನು ಕಾಂಪೌಂಡ್ ನೋಡಿದೆ. ಒಂದು ವೇಳೆ ನಾನೇನಾದರೂ ಕಾಂಪೌಂಡ್ ಏರಲು ಕಾರಿನಿಂದ ಹೊರಬಂದರೆ ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋಗುವುದು ಖಂಡಿತ. ಕಾರನ್ನು ಹಿಡಿದಿಟ್ಟುಕೊಂಡಿದ್ದ ಮರವೂ ಸಹ ಈಗ ಪ್ರವಾಹಕ್ಕೆ ಕೊಚ್ಚಿಹೋಗಿದೆ. ಇದೀಗ ತಾನೇ ಕಾರು ಸಹ ನೀರಿನಲ್ಲಿ ಮುಳುಗಲು ಆರಂಭಿಸಿದೆ ಎನ್ನುತ್ತಾನೆ.
ಧೈರ್ಯವಾಗಿರೂ. ಏನು ಆಗುವುದಿಲ್ಲ ಎಂದು ಸ್ನೇಹಿತನಿಗೆ ಧೈರ್ಯ ತುಂಬುವ ಹೊತ್ತಿಗೆ ಆ ಕಡೆ ಸ್ನೇಹಿತನ ಕಾರು ನೀರಿನಲ್ಲಿ ಕೊಚ್ಚಿ ಹೋಗಿತ್ತು. ಸುಮಾರು 1 ನಿಮಿಷ 44 ಸೆಕೆಂಡ್ ಫೋನ್ ಸಂಭಾಷಣೆ ಕೊನೆಯಾಗುವುದರ ಜತೆಗೆ ಸ್ನೇಹಿತನ ಜೀವವೂ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಇದನ್ನು ಕೇಳಿದ ಸ್ನೇಹಿತನ ಮುಖದಲ್ಲಿ ಹತಾಶೆಯ ಭಾವ ಕಾಡತೊಡಗಿತು. ಇತ್ತ ವೆಂಕಟೇಶ್ ಶವ ನಿನ್ನೆ ಪತ್ತೆಯಾಗಿದೆ.