ಬೆಂಗಳೂರು: ಗಂಡ ಕುಡಿದು ಬಂದು ಕಿರುಕುಳ ನೀಡ್ತಾನೆ ಅಂತಾ ಪತಿಯನ್ನು ತೊರೆಯುವ ಅದೆಷ್ಟೋ ಹೆಣ್ಣು ಮಕ್ಕಳನ್ನು ನಾವು ನೋಡಿದ್ದೇವೆ.ಆದರೆಈ ಸ್ಟೋರಿ ಓದಿದ್ರೆ ನಿಮ್ಗೆ ಹೆಣ್ಣು ಮಕ್ಕಳು ಹಿಂಗೂ ಇರ್ತಾರಾ ಅಂತಾ ಅನ್ನಿಸದೇ ಇರೋದಿಲ್ಲ.
ಹೌದು.. ಪತಿ ಮನೆಯಲ್ಲಿ ತಂದಿಡುತ್ತಿದ್ದ ಮದ್ಯವನ್ನು ಕುಡಿದು ಖಾಲಿ ಮಾಡುತ್ತಿದ್ದ ಪತ್ನಿಯೊಬ್ಬಳಿಗೆ ಗಂಡ ಕುಡಿಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ಆಕೆ ಆತನನ್ನು ತೊರೆದು ಹೋಗಿರುವ ಘಟನೆ ಬೆಂಗಳೂರಿನ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಾರೆ ಕೆಲಸ ಮಾಡಿಕೊಂಡಿದ್ದ ಗಂಡ ಜಯಶಂಕರ್ ಮನೆಗೆ ತಂದು ಇಡುತ್ತಿದ್ದ ಮದ್ಯವನ್ನು ಪತ್ನಿ ಗೌರಮ್ಮ ತಾನೇ ಕುಡಿದು ಖಾಲಿ ಮಾಡುತ್ತಿದ್ದಳು. ಅಲ್ಲದೇ ತಾನೂ ಕೂಡ ಕೆಲಸಕ್ಕೆ ಹೋಗುತ್ತಿದ್ದಳು. ವಾಪಾಸ್ಸು ಬರುವಾಗ ಕುಡಿದು ಬರುತ್ತಿದ್ದಳು. ಇದಕ್ಕೆ ಗಂಡ ಬುದ್ಧಿ ಹೇಳಿದ್ದಕ್ಕೆ ಗೌರಮ್ಮ ಫೆಬ್ರವರಿ 10ರಂದು ಮನೆ ಬಿಟ್ಟು ಹೋಗಿದ್ದಳು. ಬಳಿಕ ಪತಿ ಜಯಶಂಕರ್ ಬಾಗಲೂರು ಠಾಣೆಗೆ ನಾಪತ್ತೆ ದೂರು ನೀಡಿದ್ದರು.
ಹುಡುಕಾಡಿದಾಗ ಗೌರಮ್ಮ ತವರು ಮನೆಗೆ ಹೋಗಿರೋದು ಗೊತ್ತಾಗಿದೆ. ಗೌರಮ್ಮನನ್ನು ಪೊಲೀಸರು ಠಾಣೆಗೆ ಕರೆತಂದು ದಂಪತಿಯ ನಡುವೆ ರಾಜಿ ಸಂಧಾನ ಮಾಡಿಸಿದ್ದಾರೆ. ಸದ್ಯ ಮದ್ಯದ ಬಾಟಲಿಯ ಜಗಳಕ್ಕೆ ಅಂತ್ಯ ಹಾಡಿದ್ದು ಮುಂದೆ ಈ ರೀತಿ ಆಗಬಾರದೆಂದು ಬುದ್ದಿವಾದ ಹೇಳಿದ್ದಾರೆ.