ಕಾಸರಗೋಡು: ಪತಿಯು ತನ್ನ ಪತ್ನಿಯನ್ನೇ ಕಡಿದು ಕೊಲೆಗೈದ ಘಟನೆ ಬೇಡಡ್ಕ ಠಾಣಾ ವ್ಯಾಪ್ತಿಯ ಪೆರ್ಲಡ್ಕ ಎಂಬಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಪೆರ್ಲಡ್ಕ ಪೇಟೆಯ ಕ್ವಾಟರ್ಸ್ನಲ್ಲಿ ವಾಸವಾಗಿರುವ ಉಷಾ (35) ಎಂದು ಗುರುತಿಸಲಾಗಿದೆ.
ಕೃತ್ಯಕ್ಕೆ ಸಂಬಂಧಪಟ್ಟಂತೆ ಪತಿ ಅಶೋಕ್ ಅನ್ನು ಬೇಕಲ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಕೃತ್ಯದ ಬಳಿಕ ಕ್ವಾಟರ್ಸ್ಗೆ ಬೀಗ ಹಾಕಿ ಅಲ್ಲಿಂದ ತೆರಳಿದ್ದ ಅಶೋಕ್ ಅನ್ನು ಇಂದು ಬೆಳಗ್ಗೆ ಕಾಸರಗೋಡು ರೈಲ್ವೆ ನಿಲ್ದಾಣ ಪರಿಸರದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇಂದು ಮುಂಜಾನೆ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಅಯ್ಯಪ್ಪ ವ್ರತಧಾರಿಯಾಗಿದ್ದ ಅಶೋಕ್ ಬೆಳಿಗ್ಗೆ ಭಜನಾ ಮಂದಿರಕ್ಕೆ ತಲುಪದ ಹಿನ್ನಲೆಯಲ್ಲಿ ಸ್ನೇಹಿತರು ಕ್ವಾಟರ್ಸ್ಗೆ ತಲುಪಿದಾಗ ಕೃತ್ಯ ಬೆಳಕಿಗೆ ಬಂದಿದೆ. ಕ್ವಾಟರ್ಸ್ಗೆ ಬೀಗ ಜಡಿದ ಸ್ಥಿತಿಯಲ್ಲಿತ್ತು. ಕಿಟಿಕಿ ಮೂಲಕ ಗಮನಿಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು. ಬಳಿಕ ನೆರೆಹೊರೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕೃತ್ಯಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಶೋಕ್ ಕೆಲ ಸಮಯದಿಂದ ಮಾನಸಿಕ ಅಸ್ವಸ್ಥತೆ ತೋರಿಸುತ್ತಿದ್ದ ಎಂದು ನೆರೆಮನೆಯವರು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.