ನೆಲ್ಯಾಡಿ: ಮನುಷ್ಯತ್ವ, ಮಾನವೀಯತೆ ಎಲ್ಲಿದೆ ಅಂತಾ ಹುಡುಕೋ ಕಾಲದಲ್ಲಿ ನಾವಿದ್ದೇವೆ. ಆದರೆ ಇನ್ನೂ ಅಲ್ಪ ಸ್ವಲ್ಪ ಮಾನವೀಯತೆ ಉಸಿರಾಡುತ್ತಿದೆ ಎಂದು ತೋರಿಸಿಕೊಟ್ಟಿದ್ದಾರೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿಯ ಜನ..
ಯೆಸ್… ಕಳೆದ 25 ವರ್ಷಗಳಿಂದ ನೆಲ್ಯಾಡಿ ಪೇಟೆಯಲ್ಲಿ ನಿರ್ಗತಿಕನಂತೆ ಬದುಕುತ್ತಿದ್ದ ವ್ಯಕ್ತಿ ಮೊನ್ನೆ ಸಾವನ್ನಪ್ಪಿದ್ದಾಗ ತಮ್ಮ ಕುಟುಂಬದವರೇ ಯಾರೋ ನಿಧನರಾಗಿದ್ದಾರೆ ಅನ್ನೋ ರೀತಿ ಎಲ್ಲಾ ಸಮುದಾಯವರು ಜೊತೆ ಸೇರಿ ಅವರ ಅಂತಿಮ ವಿಧಾನಗಳನ್ನು ನಡೆಸೋ ಮೂಲಕ ಸೌಹಾರ್ದತೆ ಸಂದೇಶ ಸಾರಿದ್ದಾರೆ.
ಅಂದ್ಹಾಗೆ ಆ ವ್ಯಕ್ತಿಯ ಹೆಸರು ಯಾರಿಗಹೂ ಗೊತ್ತಿಲ್ಲ.ಊರು ಕೇರಿ ಅಂತೂ ಮೊದಲೇ ಗೊತ್ತಿಲ್ಲ. 25 ವರ್ಷಗಳ ಹಿಂದೆ ನೆಲ್ಯಾಡಿಗೆ ಬಂದ ಈ ವ್ಯಕ್ತಿಗೆ ಅಲ್ಲಿನ ಜನ ಇಟ್ಟ ಹೆಸರು ಸಿಐಡಿ ಶಂಕರ್ ಅಂತಾ. ಹೀಗೆ ಹೆಸರಿಡೋದಕ್ಕೂ ಒಂದು ಕಾರಣ ಇದೆ. ನೆಲ್ಯಾಡಿಗೆ ಮೊದ ಮೊದಲು ಪರಿಚಯವಾಗ ಇವರು ಸಿ ಐ ಡಿ ಆಗಿರಬೇಕು. ,ಯಾವುದೋ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸ್ ಮಾರುವೇಷದಲ್ಲಿ ಬಂದಿರಬೋದು ಅಂತಾ ನೆಲ್ಯಾಡಿ ಜನತೆ ಇವರಲ್ಲಿ ಮಾತನಾಡೋದಕ್ಕೆ ಭಯಪಡುತ್ತಿದ್ದರಂತೆ. ಹಾಗಾಗಿ ಅನಾಮಿಕ ವ್ಯಕ್ತಿಗೆ ಸಿಐಡಿ ಶಂಕರ್ ಅಂತಾ ಹೆಸರಿಟ್ಟಿದ್ದರು.
25 ವರ್ಷಗಳಿಂದ ನೆಲ್ಯಾಡಿಯಲ್ಲೇ ವಾಸವಿದ್ದ ಈ ವ್ಯಕ್ತಿಗೆ ಅಲ್ಲಿನ ಮನೆಯವರು, ಹೋಟೆಲ್ ನವರು ಊಟ ನೀಡಿ ಸಹಾಯ ಮಾಡುತ್ತಿದ್ದರು. ಆದರೆ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೊನ್ನೆ ಅವರು ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಸಾವಿನ ಸುದ್ದಿ ತಿಳಿಯತ್ತಿದ್ದಂತೆ ಇಡೀ ಊರಿಗೆ ಉರೇ ಕಣ್ಣೀರು ಹಾಕಿದೆ. ಶಂಕರ್ ರವರ ಮೃತದೇಹವನ್ನು ಸ್ವೀಕರಿಸಲು ನೆಲ್ಯಾಡಿಯ ಎಲ್ಲಾ ಸಮುದಾಯದವರು ಒಂದಾಗಿ ನಿಂತಿದ್ದರು. ಕೊನೆಗೆ ಆ್ಯಂಬುಲೆನ್ಸ್ ನಲ್ಲಿ ಅವರ ಮೃತದೇಹವನ್ನು ತಂದು ನೆಲ್ಯಾಡಿ ಗಾಂಧಿ ಮೈದಾನದಲ್ಲಿ ನೆಲ್ಯಾಡಿ ಜನತೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು, ಅಲ್ಲಿಂದ ಬೈಕ್ ರ್ಯಾಲಿ ಮೂಲಕ ಮೃತದೇಹ ಸಾಗಿಸಿ ಕೌಕ್ರಾಡಿಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಊರು ಪರಿಚಯವಿಲ್ಲದ ವ್ಯಕ್ತಿಗೆ ನೆಲ್ಯಾಡಿಯ ಸರ್ವ ಧರ್ಮದವರು ಮತ್ತು ಎಲ್ಲಾ ರಾಜಕೀಯ ಪಕ್ಷದವರು ಒಂದಾಗಿ ನಿಂತು ಅಂತ್ಯಕ್ರಿಯೆ ನಡೆಸಿದ್ದು ನೆಲ್ಯಾಡಿಯ ಮಾನವೀಯತೆಗೆ ಹಿಡಿದ ಕೈಗನ್ನಡಿಯಂತಿತ್ತು.