ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಬುಕ್ಲೊರಹಳ್ಳಿಯ ಜಮೀನೊಂದರಲ್ಲಿ ಕಂತೆ-ಕಂತೆ ಹಣ ಪತ್ತೆಯಾಗಿದೆ. ಜಾಲಿಗಿಡದ ಪೊದೆಯ ಸಮೀಪ ₹ 50, ₹ 100 ಹಾಗೂ ₹ 2 ಸಾವಿರ ಮುಖಬೆಲೆಯ ಹಣ ಸಿಕ್ಕಿದೆ.
ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ದಿಲೀಪ್ ಬ್ಯುಲ್ಡ್ ಕಂಪನಿಯ ಕಚೇರಿ ಕೂಡ ಸಮೀಪದಲ್ಲೇ ಇದೆ. ಕೆಲ ದಿನಗಳ ಹಿಂದೆ ಇದೇ ಕಚೇರಿಯಲ್ಲಿ ₹ 36 ಲಕ್ಷ ಹಣ ಕಳವಾಗಿತ್ತು. ಬ್ಯಾಂಕಿನಿಂದ ಬಿಡಿಸಿಕೊಂಡು ತಂದಿದ್ದ ಹಣವನ್ನು ಚಾವಣಿ ಮುರಿದು ಕಳವು ಮಾಡಲಾಗಿತ್ತು.

ಹೀಗಾಗಿ ಯಾರೋ ಕಳ್ಳರೇ ಈ ಹಣವನ್ನ ಬಿಸಾಡಿ ಹೋಗಿದ್ದಾರೆ ಅಂತಾ ಹೇಳಲಾಗುತ್ತಿದೆ. ಇನ್ನು ಭಾರೀ ಮೊತ್ತದ ಹಣವನ್ನ ನೋಡಿದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಇಂದು ಬೆಳಿಗ್ಗೆ ತಳುಕು ಪೊಲೀಸರಿಗೆ ಕರೆ ಮಾಡಿದ ಅನಾಮಧೇಯ ವ್ಯಕ್ತಿಯೊಬ್ಬ ಜಮೀನಿನಲ್ಲಿ ಕಂತೆ ಕಂತೆ ಹಣ ಬಿದ್ದಿದೆ ಎಂದು ತಿಳಿಸಿದ್ದಾನೆ. ಕೂಡಲೇ ಧಾವಿಸಿದ ಪೊಲೀಸರಿಗೂ ಇದನ್ನು ಕಂಡು ಅಚ್ಚರಿಯಾಗಿದೆ. ಸದ್ಯ ಪೊಲೀಸರು ಪರಿಶೀಲನೆ ನಡೆಸಿತ್ತಿದ್ದಾರೆ.


