ಕುಂದಾಪುರ: ಉಡುಪಿ ಜಿಲ್ಲೆಯ ಕಮಲಶಿಲೆ ಗ್ರಾಮದ ಹಳ್ಳಿಹೊಳೆಯ ಎಂಬಲ್ಲಿ ಜೂ.18ರಂದು ರಾತ್ರಿ ರಾಘವೇಂದ್ರ ಯಡಿಯಾಳ ಎಂಬವರ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಂಕರನಾರಾಯಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಶ್ರೀಧರ ಮಡಿವಾಳ (38) ಬಂಧಿತ ಆರೋಪಿ.
ಬೈಂದೂರು ಉಪ್ಪುಂದ ನಿವಾಸಿಯಾಗಿರುವ ಶ್ರೀಧರ ಮಡಿವಾಳ ಜೂನ್ 18 ರಂದು ರಾತ್ರಿ ರಾಘವೇಂದ್ರ ಯಡಿಯಾಳ ಎಂಬವರ ಮನೆಯಲ್ಲಿ ಇರಿಸಿದ್ದ ಸುಮಾರು 1,30,000 ಲಕ್ಷ ರೂ. ಬೆಲೆಬಾಳುವ 28 ಗ್ರಾಂ ತೂಕದ 2 ಚಿನ್ನದ ಬಳೆ ಸುಮಾರು 1,50,000 ಲಕ್ಷ ರೂ. ಬೆಲೆ ಬಾಳುವ ಮಲ್ಲಿಗೆ ಮಿಟ್ಟಿಯ 30 ಗ್ರಾಂ ಚಿನ್ನದ ಸರ -1, ಸುಮಾರು 20,000 ಬೆಲೆ ಬಾಳುವ ಮೂರು ಹರಳಿನ 4 ಗ್ರಾಂ ಚಿನ್ನದ ಉಂಗುರ, 5 ಸಾವಿರ ನಗದು ಹಣ ಕಳವು ಮಾಡಿದ್ದ.ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ ಕಳವು ಮಾಡಿದ 2 ಚಿನ್ನದ ಬಳೆಗಳು, 1 ಮಲ್ಲಿಗೆ ಮಿಟ್ಟಿಯ ಚಿನ್ನದ ಸರ, ಹಾಗೂ ಒಂದು ಚಿನ್ನದ ಉಂಗುರ ವಶಪಡಿಸಿಕೊಳ್ಳಲಾಗಿದ್ದು ಈ ಸೊತ್ತುಗಳ ಮೌಲ್ಯ ಸುಮಾರು 3 ಲಕ್ಷ ರೂ. ಆಗಿದೆ.