ಉಡುಪಿ: ಹಾಡಹಗಲೇ ಮನೆಗೆ ನುಗ್ಗಿ ಖದೀಮರು ಲಕ್ಷಾಂತರ ರೂಪಾಯಿ ಮೌಲ್ಯದ ಹಣ ಹಾಗೂ ಚಿನ್ನಾಭರಣ ದೋಚಿದ ಘಟನೆ ಬೈಂದೂರಿನ ಪಡುವರಿಯಲ್ಲಿ ನಡೆದಿದೆ.
ಬೈಂದೂರಿನ ಪಡುವರಿಯ ಪಟವಾಲ್ ಹೌಸ್ ರವರ ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿದ ಕಳ್ಳರು 20 ಪವನ್ ಚಿನ್ನ ಹಾಗೂ 2 ಲಕ್ಷ ರೂಪಾಯಿ ಹಣ ಕದ್ದು ಪರಾರಿಯಾಗಿದ್ದಾರೆ.
ಕಳವಾದ ಮನೆಯ ಸುತ್ತ ಮನೆಗಳಿದ್ದು, ಜನನಿಬಿಡ ಪ್ರದೇಶವಾಗಿದೆ. ಪಕ್ಕದಲ್ಲಿ ಪಡುವರಿ ಹಾಗೂ ಸೋಮೇಶ್ವರ ರಸ್ತೆ ಹಾದು ಹೋಗಿದೆ. ಹಂಚಿನ ಮನೆಯಾಗಿರುವ ಕಾರಣ ಕಳ್ಳರಿಗೆ ಬೀಗ ಮುರಿದು ಒಳನುಗ್ಗಲು ಸುಲಭವಾಗಿದೆ. ಈ ಮನೆಯಲ್ಲಿ ಪರಮೇಶ್ವರ ಪಟವಾಲ್ ಅವರ ಮಗ, ಸೊಸೆ ಮತ್ತು ಇಬ್ಬರು ಮಕ್ಕಳು ವಾಸಿಸುತ್ತಿದ್ದಾರೆ.
ಮನೆಯ ಬಗ್ಗೆ ಪಕ್ಕ ಮಾಹಿತಿ ಇರುವವರೇ ಈ ಕೆಲಸವನ್ನು ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಶ್ವಾನದಳವು ಮನೆಯ ಪಕ್ಕದ ರಸ್ತೆಯವರೆಗೆ ತೆರಳಿ ಮರಳಿದೆ. ಸ್ಥಳಕ್ಕೆ ಬೆರಳಚ್ಚು ತಂಡ ಹಾಗೂ ಬೈಂದೂರು ಠಾಣೆಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿದ ಠಾಣಾಧಿಕಾರಿಗಳು, ಕಳ್ಳರ ಪತ್ತೆಗೆ ಎಸ್ಪಿ ಮಾರ್ಗದರ್ಶನದಲ್ಲಿ ತಂಡ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.


