ಬೆಳ್ತಂಗಡಿ: ಇಲ್ಲಿನ ಮುಂಡಾಜೆ ಗ್ರಾಮದ ಒಂಜರೆಬೈಲು ನಿವಾಸಿ ಹರ್ಷ ಭಟ್ ಎಂಬವರ ಮನೆಯಲ್ಲಿ ಶನಿವಾರ ತಡರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಮುಂಬಾಗಿಲಿನ ಚಿಲಕನ್ನು ಕಿಟಕಿ ಮೂಲಕ ತೆಗೆದು ಒಳ ಪ್ರವೇಶಿಸಿದ ಕಳ್ಳರು ಮನೆಯಲ್ಲಿದ್ದ ಆರು ಪವನ್ ಚಿನ್ನ ಹಾಗೂ 14 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ.
ರಾತ್ರಿ 2 ಗಂಟೆ ಸುಮಾರಿಗೆ ಮನೆಯ ಇನ್ವಟರ್ ಸಿಸ್ಟಮ್ ಆಫ್ ಆಗಿದೆ. ಕೂಡಲೇ ಮನೆಯವರು ಎಚ್ಚರಗೊಂಡಿದ್ದಾರೆ. ಈ ವೇಳೆ ಮನೆ ಎದುರಿನ ಬಾಗಿಲಿನ ಬಳಿ ಓರ್ವ ಕಂಡಿದ್ದಾನೆ. ಆಗ ಮನೆಮಂದಿ ಬೊಬ್ಬೆ ಹೊಡೆದಿದ್ದಾರೆ. ಬೊಬ್ಬೆ ಹೊಡೆಯುತ್ತಿದ್ದಂತೆ ಕಳ್ಳ ಓಡಿ ಹೋಗಿದ್ದಾನೆಂದು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ಒಟ್ಟು 5 ಜನ ಇದ್ದು ,2 ಬೆಡ್ ರೂಮ್ ಗಳಲ್ಲಿ ಮಲಗಿದ್ದರು. ಇನ್ನೊಂದು ಬೆಡ್ ರೂಮಿಗೆ ನುಗ್ಗಿದ ಕಳ್ಳರು ಅದೇ ರೂಮಿನಲ್ಲಿದ್ದ ಕಪಾಟಿನ ಬೀಗದ ಕೈ ಉಪಯೋಗಿಸಿ ನಗ ನಗದು ದೋಚಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪಿ ಎಸ್ ಐ ಕೃಷ್ಣಕಾಂತ್ ಪಾಟೀಲ್ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಪೋಲಿಸ್ ಶ್ವಾನದಳವನ್ನು ಕರೆತರಲಾಗಿದ್ದು ಶ್ವಾನವು ಮನೆಯಿಂದ 500 ಮೀ.ದೂರದವರೆಗೆ ಮುಖ್ಯರಸ್ತೆಯಲ್ಲಿ ಕ್ರಮಿಸಿ ವಾಪಸ್ಸಾಗಿದೆ.
ಕಳೆದ ವಾರ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕಕ್ಕಿಂಜೆ ಗ್ರಾಮದ ಕತ್ತರಿಗುಡ್ಡೆಯ ಮನೆಯಲ್ಲೂ ಯಾರು ಇಲ್ಲದ ವೇಳೆ ಎರಡು ಪವನ್ ಚಿನ್ನ, 15,000 ನಗದು ಹಣ ಕಳ್ಳತನ ಮಾಡಲಾಗಿತ್ತು.