ಕಡಬ: ತನ್ನ ಹೊಟೇಲ್ನಲ್ಲಿ ಮದ್ಯ ಸೇವಿಸಲು ಬಿಡಲಿಲ್ಲ ಎಂಬ ಕಾರಣಕ್ಕೆ ಹೊಟೇಲ್ ಮಾಲೀಕನಿಗೆ ವ್ಯಕ್ತಿಯೊಬ್ಬ ಕತ್ತಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿ ಜೀವಬೆದರಿಕೆ ಹಾಕಿರುವ ಘಟನೆ ಅಲಂಕಾರಿನಲ್ಲಿ ನಡೆದಿದೆ.
ಕಡಬ ತಾಲೂಕಿನ ಅಲಂಕಾರು ಪೇಟೆಯಲ್ಲಿರುವ ಜಯಕರ ಪೂಜಾರಿ ಎಂಬುವವರ ಹೊಟೇಲ್ಗೆ ಭಾಸ್ಕರ ಎಂಬವರು ಮದ್ಯದ ಬಾಟಲಿ ಹಿಡಿದುಕೊಂಡು ಬಂದು ಸೋಡ ಕೊಡುವಂತೆ ಕೇಳಿದ್ದಾರೆ. ಈ ವೇಳೆ ಹೊಟೇಲ್ ಮಾಲೀಕ ಮದ್ಯ ಕುಡಿಯದಂತೆ ಸೂಚಿಸಿದರೂ ಲೆಕ್ಕಿಸದೆ ಅಲ್ಲಿಯೇ ಗ್ಲಾಸ್ನಲ್ಲಿ ಮದ್ಯ ಕುಡಿದು ವಾಂತಿ ಮಾಡಿ ‘ಸೋಡಾಕ್ಕೆ ಹತ್ತು ರೂಪಾಯಿ’ ತೆಗೆದುಕೊಳ್ಳುತ್ತೀಯಾ ಎಂದು ಪ್ರಶ್ನಿಸಿದ್ದಾನೆ.
ಬಳಿಕ ಹೊರಗೆ ಹೋಗಿ ತನ್ನ ರಿಕ್ಷಾದಲ್ಲಿದ್ದ ಕತ್ತಿಯನ್ನು ತಂದು ಜಯಕರ ಮೇಲೆ ಬೀಸಿದ್ದು ಪರಿಣಾಮ ಹೋಟೆಲ್ ಮಾಲೀಕನ ಕೈಗೆ ತಾಗಿದೆ. ಮರುದಿನ ಹೊಟೇಲ್ಗೆ ಮತ್ತೆ ಬಂದು ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.