ಮಂಗಳೂರು : ಸೋಶಿಯಲ್ ಮೀಡಿಯಾದಲ್ಲಿ ಯುವಕನೊಬ್ಬನ ಸ್ನೇಹ ಸಂಪಾದಿಸಿಕೊಂಡು, ಬಳಿಕ ಆತನನ್ನು ಹನಿಟ್ರ್ಯಾಪ್ ಜಾಲಕ್ಕೆ ತಳ್ಳಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಂಬಳೆ ಮೂಲದ ಯುವಕನೊಬ್ಬನಿಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಕೃಷ್ಣಾ ಪುರದ ಇಬ್ಬರು ಮಹಿಳೆಯರ ಪರಿಚಯವಾಗಿತ್ತು. ಹಲವು ದಿನಗಳ ಕಾಲ ಮೆಸೇಜ್ ಮೂಲಕ ವಿಶ್ವಾಸ ಗಳಿಸಿಕೊಂಡ ಬಳಿಕ ಯುವಕನನ್ನು ಸುರತ್ಕಲ್ ಸಮೀಪದ ಕೃಷ್ಣಾಪುರಕ್ಕೆ ಬರುವಂತೆ ತಿಳಿಸಿದ್ದರು. ಮಹಿಳೆಯರೊಂದಿಗೆ ಮತ್ತಿಬ್ಬರು ಯುವಕರು ಸೇರಿಕೊಂಡು ಆ ಬಳಿಕ ಯುವಕನನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಆತನನ್ನು ವಿವಸ್ತ್ರಗೊಳಿಸಿ ಫೋಟೋ ತೆಗೆದು 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಆತನ ಬಳಿ ಅಷ್ಟು ಹಣ ಇಲ್ಲದ ಕಾರಣ ಕಾರನ್ನು ಒತ್ತೆಯಿಟ್ಟುಕೊಂಡು ಯುವಕನನ್ನು ಕಳಿಸಿದ್ದರು.
ನಂತರ ಹಣಕ್ಕಾಗಿ ಕಿರುಕುಳ ಹೆಚ್ಚಾದ್ದರಿಂದ ಯುವಕ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾನೆ. ಮತ್ತೆ ಹಣ ಪಡೆಯಲು ಯುವಕ ಆರೋಪಿಗಳನ್ನು ಪಂಪ್ವೆಲ್ಗೆ ಬರುವಂತೆ ಸೂಚಿಸಿದ್ದ. ಹಣ ಪಡೆಯಲು ಬಂದ ಸಂದರ್ಭ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಸುರತ್ಕಲ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.