ಕಟಪಾಡಿ: ವಾರದ ಹಿಂದೆ ಕಟಪಾಡಿ ಮೂಡಬೆಟ್ಟುವಿನಲ್ಲಿ ತನ್ನ ಚಿಕ್ಕಮ್ಮನ ಉತ್ತರಕ್ರಿಯೆ ಕಾರ್ಯಕ್ರಮ ಮುಗಿಸಿ ಮನೆಗೆ ಬರುತ್ತಿದ್ದ ಪಾಂಗಳ ಆರ್ಯಾಡಿ ನಿವಾಸಿ ರಾಜು ಪೂಜಾರಿ ಅವರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರನ್ನು ಪತ್ತೆ ಹಚ್ಚಿ ಅದರ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಕಾಪು ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಘಟನೆಯಲ್ಲಿ ಪಾದಚಾರಿ ರಾಜು ಸಾವನ್ನಪ್ಪಿದ್ದರು.
ಮಂಗಳೂರು ಕುತ್ತಾರು ಪದವು ಮದನಿ ನಗರ ನಿವಾಸಿ ಮಹಮ್ಮದ್ ಮುನಾವರ್ ಅತಿವೇಗದಿಂದ ಕಾರನ್ನು ಚಲಾಯಿಸಿಕೊಂಡು ಬಂದು ಮೂಡಬೆಟ್ಟುವಿನ ಸ್ಟೀಲ್ ಫರ್ನಿಚರ್ ರಾಜು ಪೂಜಾರಿ ಅವರಿಗೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೆ ಪರಾರಿಯಾಗಿದ್ದ. ಗಾಯಾಳುವನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಈ ಘಟನೆ ಬಗ್ಗೆ ಲತಾ ಬಂಗೇರಾ ಅವರು ನೀಡಿದ ದೂರಿನಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರು ಸಂಚರಿಸಿರುವ ಬಗ್ಗೆ ಸಿಸಿ ಕ್ಯಾಮರ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದ ಕಾಪು ಇನ್ಸ್ ಪೆಕ್ಟರ್ ಹಾಗೂ ತಂಡ ಖಚಿತ ಮಾಹಿತಿ ಮೇರೆಗೆ ಹಳೆಯಂಗಡಿ ಪಡು ಪಣಂಬೂರು ನಡುವೆ ಚಾಲಕನ ಸಹಿತ ಮಾರುತಿ ವ್ಯಾಗನಾರ್ ಕಾರು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಿನ ಮುಂಭಾಗ ಜಖಂಗೊಂಡಿದ್ದು ತನಿಖೆ ಮುಂದುವರೆದಿದೆ.