Sunday, April 28, 2024
Homeಕರಾವಳಿಇದು ನೋಡಿ ನಮ್ಮ ನಿಜವಾದ ಕರಾವಳಿ; ಬಂಟ್ವಾಳದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಏರ್ಪಡಿಸಿದ ಹಿಂದೂಗಳು;...

ಇದು ನೋಡಿ ನಮ್ಮ ನಿಜವಾದ ಕರಾವಳಿ; ಬಂಟ್ವಾಳದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಏರ್ಪಡಿಸಿದ ಹಿಂದೂಗಳು; ಜಗತ್ತಿಗೆ ಭಾವೈಕ್ಯತೆಯ ಸಂದೇಶ ಸಾರಿದ ಹಿಂದೂ ಮುಸ್ಲಿಂರು

spot_img
- Advertisement -
- Advertisement -

ಬಂಟ್ವಾಳ; ಕರಾವಳಿ ಅಂದಾಕ್ಷಣ ಕರಾವಳಿಯೇತರಿಗೆ ಮೊದಲಿಗೆ ನೆನಪಾಗೋದು ಇಲ್ಲಿನ ಹಿಂದೂ ಮುಸ್ಲಿಂ ಜಗಳ, ಕೋಮುವಾದ ಇದೇ. ಆದರೆ ಕರಾವಳಿಯಲ್ಲಿ ಅಲ್ಲೋ ಇಲ್ಲೋ ಆಗುವ ಇಂತಹ ಘಟನೆಗಳಿಂದಾಗಿ ಅದೆಷ್ಟೋ ಜನ ಕರಾವಳಿ ಅಂದ್ರೇನೇ ಹೀಗೆ ಅನ್ನೋ ತಮ್ಮ ಸೆಲ್ಫ್ ಜಡ್ಜ್ ಮೆಂಟ್ ಗೆ ಬಂದು ಬಿಡುತ್ತಿದ್ದಾರೆ. ಆದರೆ ಇಂದಿಗೂ ಅದೆಷ್ಟೋ ಹಿಂದೂ ಮುಸ್ಲಿಂರು ತೋರಿಕೆಗೆ ಅಲ್ಲದೇ ನಿಜವಾಗಿಯೂ ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದಾರೆ. ಅಂತಹದ್ದೊಂದು ಘಟನೆ ಬಂಟ್ವಾಳ ಸಾಕ್ಷಿಯಾಗಿದೆ.

ಹೌದು.. ಬಂಟ್ವಾಳದ ಕೆದಿಲ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಇತ್ತೀಚೆಗೆ ಬ್ರಹ್ಮಕಲಶೋತ್ಸವದಲ್ಲಿ ಮುಸ್ಲಿಮರು ನಾವೆಲ್ಲಾ ಒಂದೇ ಎಂಬಂತೆ ಭಾಗವಹಿಸಿದ್ದರು. ಮುಸ್ಲಿಂ ಸಮುದಾಯದವರ ಸಹಕಾರಕ್ಕೆ ಪ್ರತಿಯಾಗಿ ಇದೀಗ ಹಿಂದೂಗಳು ಇಫ್ತಾರ್ ಕೂಟವನ್ನು ಆಯೋಜಿಸಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.


ಕರಾವಳಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಾಗುವ ವೇಳೆ ಹೊರೆಕಾಣಿಕೆ ಸಲ್ಲಿಸುವ ಪದ್ದತಿಯಿದೆ. ಅದೇ ರೀತಿ ಕೆದಿಲ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆದಿತ್ತು. ಬ್ರಹ್ಮಕಲಶೋತ್ಸವಕ್ಕೆ ಹೊರೆಕಾಣಿಕೆ ಬರುವ ಸಂದರ್ಭ ಪರಿಸರದ ಮಸೀದಿ ವ್ಯಾಪ್ತಿಯ ಮುಸ್ಲಿಂ ಭಾಂದವರು ಅಲ್ಲಲ್ಲಿ ರಸ್ತೆಯಂಚಿನಲ್ಲಿ ನಿಂತು ಹೊರೆಕಾಣಿಕೆ ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಶರಬತ್ತು ಹಂಚಿ, ಹೊರೆ ಕಾಣಿಕೆ ನೀಡುವ ಮೂಲಕ ಮೆರವಣಿಗೆಯ ಯಶಸ್ವಿಗೆ ಸಹಕರಿಸಿ ಸಾಮರಸ್ಯ ಮೆರೆದಿದ್ದರು.ಅಲ್ಲದೇ, ಪೇಟೆಯ ಪ್ರಮುಖ ಜಾಗದಲ್ಲಿ ಬ್ರಹ್ಮಕಲಶಕ್ಕೆ ಶುಭಕೋರಿ ಬ್ಯಾನರ್ ಕೂಡಾ ಅಳವಡಿಸಿದ್ದರು.

ಹಿಂದೂ ಮುಸ್ಲಿಂರ ನಡುವಿನ ಈ ಬಾಂಧವ್ಯ ಸದಾ ಇದೇ ರೀತಿ ಇರಬೇಕು ಅನ್ನೋ ಕಾರಣಕ್ಕೆ ದೈವಸ್ಥಾನದ ಆಡಳಿತ ಸಮಿತಿಯವರು ಮುಸ್ಲಿಂ ಭಾಂದವರ ಮನೆ ಮನೆಗೆ ಹೋಗಿ ಬ್ರಹ್ಮಕಲಶೋತ್ಸವದ ಆಮಂತ್ರಣ ನೀಡಿ, ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದರು.ಇದರಿಂದ ಪ್ರೇರಿತರಾದ ಮುಸ್ಲಿಂ ಭಾಂದವರೂ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸುವ ಮೂಲಕ ಭಾವೈಕ್ಯ ವಾತಾವರಣ ಸೃಷ್ಠಿಯಾಗಿತ್ತು. ಇಂತಹ ಸೌಹಾರ್ದತೆಯ ವಾತಾವರಣ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಮೆರೆದ ಸಾಮರಸ್ಯದ ಸವಿನೆನಪು ಶಾಶ್ವತವಾಗಿರಿಸಬೇಕು ಎಂಬ ದೃಷ್ಟಿಯಿಂದ ದೈವಸ್ಥಾನದ ಆಡಳಿತ ಸಮಿತಿ ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಪರಸ್ಪರ ಮಾನವೀಯತೆಯ ಸಂದೇಶ ಸಾರಿದೆ.

ರಂಜಾನ್ ಮಾಸದ ಈ ತಿಂಗಳಲ್ಲಿ ಕೆದಿಲ ಗ್ರಾಮದ ಪಾಟ್ರಕೋಡಿಯ ಜುಮಾ ಮಸೀದಿ ವಠಾರದಲ್ಲಿ, ಧೂಮಾವತಿ ದೈವಸ್ಥಾನ ಇಫ್ತಾರ್ ಕೂಟವನ್ನು ಆಯೋಜಿಸಿ, ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಎನ್ನುವ ಸಂದೇಶವನ್ನು ಎರಡೂ ಸಮುದಾಯದವರು ಸಾರಿದರು.ಇಫ್ತಾರ್ ಕೂಟದಲ್ಲಿ ದೈವಸ್ಥಾನ ಮತ್ತು ಮಸೀದಿಯ ಪ್ರಮುಖರು, ಹಿಂದೂ – ಮುಸ್ಲಿಂ – ಕ್ರೈಸ್ತ ಕೋಮಿನ ಜನರು ಭಾಗವಹಿಸಿ ಸೌಹಾರ್ದತೆಯನ್ನು ಮೆರೆದಿದ್ದಾರೆ. ಇದೇ ವೇಳೆ ಮಸೀದಿಯ ವತಿಯಿಂದ ದೈವಸ್ಥಾನದ ಪ್ರಮುಖರನ್ನು ಸನ್ಮಾನಿಸಲಾಯಿತು. ನಿಜಕ್ಕೂ ಇದೊಂದು ಅದ್ಭುತ ಕ್ಷಣ ಎಂದರೆ ಅತಿಶಯೋಕ್ತಿಯಲ್ಲ. ಕೋಮು ಗಲಭೆಯಿಂದಲೇ ಸದ್ದಾಗುವ ಕರಾವಳಿಯಲ್ಲಿ ಇಂತಹ ಬೆಳವಣಿಗೆಗಳು ಪದೇ ಪದೇ ನಡೆದರೆ ದಕ್ಷಿಣಕನ್ನಡ ಜಿಲ್ಲೆಗಿರುವ ಕೋಮು ಜಿಲ್ಲೆ ಅನ್ನೋ ಹಣೆಪಟ್ಟಿ ಹೋಗೋದರಲ್ಲಿ ಸಂದೇಹವಿಲ್ಲ. ಹಾಗೇ ಸೌಹಾರ್ದಯುತ ವಾತಾವರಣ ನಿರ್ಮಾಣವಾಗೋದರಲ್ಲಿ ಎರಡು ಮಾತಿಲ್ಲ.

- Advertisement -
spot_img

Latest News

error: Content is protected !!