ಸುಳ್ಯ: ಪ್ರೀತಿಸಿ ಮದುವೆಯಾಗಿದ್ದ ಗಂಡ ಕೈಬಿಟ್ಟ ಕಾರಣ ಕೇರಳ ರಾಜ್ಯದ ಕಣ್ಣೂರು ಮೂಲದ ಯುವತಿ ಅಕ್ಷರಶಃ ಅನಾಥ ಪ್ರಜ್ಞೆ ಅನುಭವಿಸುತ್ತಿದ್ದಾರೆ. ಇತ್ತ ಗಂಡನ ಮನೆಯಿಂದ ಹೊರದೂಡಿಸಿಕೊಂಡು, ಅತ್ತ ತವರು ಮನೆಗೂ ಹೋಗಲು ಸಾಧ್ಯವಾಗದೆ ಸುಳ್ಯ ಪಟ್ಟಣದ ಲಾಡ್ಜ್ನಲ್ಲಿ ದಿನದೂಡುತ್ತಿದ್ದಾರೆ.

ಕೇರಳದ ಕಣ್ಣೂರಿನ ನಿವಾಸಿ ಶಾಂತಿ ಜೂಬಿ 2014ರಲ್ಲಿ ಫೇಸ್ಬುಕ್ ಮೂಲಕ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಇಬ್ರಾಹಿಂ ಖಲೀಲ್ ಕಟ್ಟೆಕಾರ್ ನ ಪರಿಚಯವಾಗಿದೆ. ಈ ಪರಿಚಯ ಆ ಬಳಿಕ ಪ್ರೇಮಕ್ಕೆ ತಿರುಗಿದೆ. ಗಂಡನನ್ನು ಬಿಟ್ಟು ಬಂದಿದ್ದ ಶಾಂತಿ 2017ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ಆಸಿಯಾ ಎಂದು ಬದಲಾಯಿಸಿದ್ದಾಳೆ. ಬಳಿಕ ಬೆಂಗಳೂರಿನಲ್ಲಿ ಇವರಿಬ್ಬರು ಮದುವೆಯನ್ನು ಮಾಡಿಕೊಂಡಿದ್ದರು. ಮೊದಲ ಗಂಡ ಹಾಗೂ ಕುಟುಂಬವನ್ನು ತ್ಯಜಿಸಿ ಖಲೀಲ್ ಜೊತೆ ಬಂದ ಶಾಂತಿ ಜೂಬಿ ಯಾನೆ ಆಸಿಯಾ ಇದೀಗ ತನಗೆ ಖಲೀಲ್ ಮೋಸ ಮಾಡಿದ್ದಾನೆ ಎಂದು ಪೊಲೀಸರು, ಮುಸ್ಲಿಂ ಸಂಘಟನೆ, ಹ್ಯೂಮನ್ ರೈಟ್ಸ್ ಕಮಿಟಿ ಮೊರೆ ಹೋಗಿದ್ದಾಳೆ.
ಮತಾಂತರ ಬಳಿಕ ಶಾಂತಿ ಜೂಬಿ ಆಸಿಯಾ ಆಗಿ ಹೆಸರು ಬದಲಾಯಿಸಿ ಕೊಳ್ಳುವುದಲ್ಲದೆ ಆತನನ್ನು ನಂಬಿ ಬೆಂಗಳೂರಿನ ವಿಜಯನಗರದಲ್ಲಿ ನಾಲ್ಕೈದು ಕೋಟಿ ರೂಪಾಯಿ ಬೆಲೆಬಾಳುವ ಮನೆ ಹಾಗೂ ತವರಿನ ಎಲ್ಲ ಆಸ್ತಿಯನ್ನು ಶಾಂತಿ ಇಬ್ರಾಹಿಂಗೆ ನೀಡಿದ್ದಳು.
ಮದುವೆಯಾದ ಮೂರು ವರ್ಷಗಳ ನಂತರ ಇಬ್ರಾಹಿಂ ಏಕಾಏಕಿ ಮನೆಯಿಂದ ನಾಪತ್ತೆಯಾದ. ಅನಂತರ ಇಬ್ರಾಹಿಂ ಮನೆಯವರು ಆಸಿಯಾಳನ್ನು ಮನೆಯಿಂದ ಹೊರಗೆ ಹಾಕಿದರು. ಅತ್ತ ಆಸಿಯಾ ತವರಿಗೂ ಹೋಗಲು ಆಗದೆ, ಇತ್ತ ಅತ್ತೆ ಮನೆಯಲ್ಲೂ ಬದುಕಲು ಅವಕಾಶ ಸಿಗದೆ ಅಸಿಯಾ ಇದೀಗ ಅಸಹಾಯಕ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಇಬ್ರಾಹಿಂನನ್ನು ಹುಡುಕಿಕೊಡುವಂತೆ ಮುಸ್ಲಿಂ ನಾಯಕರಲ್ಲಿ ವಿನಂತಿಸಿದರೂ ಪ್ರಯೋಜನವಾಗಿಲ್ಲ. ಕೊನೇ ಪ್ರಯತ್ನವೆಂಬಂತೆ ಈಗ ಹಿಂದೂ ಸಂಘಟನೆಯ ಶರಣ್ ಪಂಪ್ ವೆಲ್ ಹಾಗು ದುರ್ಗಾವಾಹಿನಿ ತಂಡದ ಸದಸ್ಯರೊಂದಿಗೆ ಸುಳ್ಯ ಪೊಲೀಸ್ ಠಾಣೆಗೆ ಆಗಮಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಶಾಂತಿ ಜೂಬಿ@ಆಸಿಯಾ ತನ್ನ ಗಂಡನ್ ಇಬ್ರಾಹಿಂ ಖಲೀಲ್ ವಿರುದ್ದ ದೂರು ನೀಡಲು ಒಪ್ಪದೇ ಆತನ ಸಹೋದರ ಶಿಯಾಬ್ ಕಟ್ಟೆಕಾರ್ ವಿರುದ್ಧ ಕೇಸು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಇಬ್ರಾಹಿಂ ಖಲೀಲ್ ನ ಸಹೋದರ ಶಿಯಾಬ್ ಕಟ್ಟೆಕಾರ್ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಬೆದರಿಕೆ ಹಾಕಿರುವ ಕುರಿತು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೇಸು ದಾಖಲಿಸಿ ನಂತರ ಮಾತನಾಡಿದ ಹಿಂದೂ ಮುಖಂಡ ಶರಣ್ ಪಂಪ್ ವೆಲ್, ಕಣ್ಣೂರಿನ ಒಳ್ಳೆಯ ಮನೆತನದ ವಿವಾಹಿತ ಶಾಂತಿ ಜೂಬಿಯನ್ನು ತನ್ನ ಮೊದಲ ಗಂಡ ಮತ್ತು ಕುಟುಂಬದಿಂದ ಬೇರ್ಪಡಿಸಿ ಲವ್ ಜಿಹಾದ್ ಮೂಲಕ ಸುಳ್ಯದ ಇಬ್ರಾಹಿಂ ಖಲೀಲ್ ಮದುವೆಯಾಗಿರುತ್ತಾನೆ. ಪ್ರೀತಿಯ ನಾಟಕವಾಡಿ ಮೂರುವರೆ ವರ್ಷ ಒಟ್ಟಿಗಿದ್ದು, ದೈಹಿಕ ಸಂಬಂಧ ಬೆಳೆಸಿ ನಂತರ ವಿನಃ ಕಾರಣ ಈ ಮಹಿಳೆಯನ್ನು ಬೀದಿಗೆ ತಂದು ನಿಲ್ಲಿಸಿರುವುದು ಖಂಡನೀಯ. ಈ ಬಗ್ಗೆ ಸುಳ್ಯ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯಲ್ಲಿ ಇನ್ಸ್ ಪೆಕ್ಟರ್ ನವಿಚಂದ್ರ ಜೋಗಿ ಜೊತೆ ಮಾತುಕತೆ ನಡೆಸಿ, ಶಾಂತಿ ಜೂಬಿಗೆ ಆದಷ್ಟು ಬೇಗ ಕಾನೂನು ಮೂಲಕ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದೇವೆ. ಹಾಗೆಯೇ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿರುವ ಶಾಂತಿ ಜೂಬಿ ಮತ್ತೆ ಹಿಂದೂ ಧರ್ಮಕ್ಕೆ ವಾಪಾಸ್ ಬರುವುದಾದ್ರೆ ಧರ್ಮದ ಆಧಾರದ ಮೇಲೆ ಸೇರಿಸಿಕೊಳ್ಳಲು ತಯಾರಿದ್ದೇವೆ ಎಂದು ತಿಳಿಸಿದರು.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಂತಿ ಜೂಬಿ@ಆಸಿಯಾ, ನನ್ನ ಗಂಡ ಖಲೀಲ್ ನನ್ನು ವಾಪಾಸ್ ಪಡೆಯಲು ನಾನು ಸುಳ್ಯಕ್ಕೆ ಬಂದಿದ್ದೇನೆ. ಆದರೆ ಖಲೀಲ್ ನ ಸಹೋದರ ನನ್ನನ್ನು ಮತ್ತು ಖಲೀಲ್ ನ ಒಂದಾಗಲು ಬಿಡುತ್ತಿಲ್ಲ. ಹಿಂದೂ ಧರ್ಮ ಬಿಟ್ಟು ಇಸ್ಲಾಂ ಗೆ ಮತಾಂತರ ಆಗಿದ್ದೇನೆ. ಮತ್ತೆ ಹಿಂದೂ ಧರ್ಮಕ್ಕೆ ಬರುವುದಿಲ್ಲ. ನಾನು ನಂಬಿದವರೇ ನನಗೆ ಮೋಸ ಮಾಡಿದ್ದಾರೆ. ನನಗೆ ನನ್ನನ್ನು ಇಸ್ಲಾಂ ಧರ್ಮದಂತೆ ಮದುವೆಯಾದ ಇಬ್ರಾಹಿಂ ಖಲೀಲ್ ಬೇಕು. ನಾನು ಖಲೀಲ್ ನ ಹೀಗೆ ಬಿಟ್ಟರೆ ಆತ ಮುಂದೆ ನನ್ನಂತೆ ಇನ್ನೊಂದು ಯುವತಿಗೆ ಈ ರೀತಿಯ ಮೋಸ ಮಾಡುತ್ತಾನೆ. ನನಗಾದ ಅನ್ಯಾಯ ಇನ್ನು ಮುಂದೆ ಯಾವ ಯುವತಿಗೂ ಆಗಬಾರದು ಎಂದು ಹೇಳಿದ್ದಾರೆ.
