ಚಿಕ್ಕಮಗಳೂರು; ಕಾಫಿನಾಡಿನಲ್ಲಿ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನನ್ನು ವಿವಾಹವಾಗಿದ್ದು, ಮದುವೆ ಅಡ್ಡಿ ಮಾಡಲು ಬಂದ ಭಜರಂಗದಳದವರ ವಿರುದ್ಧ ಆಕೆ ಆಕ್ರೋಶ ಹೊರ ಹಾಕಿದ್ದಾಳೆ.
ಹುಡುಗ ಜಾಫರ್- ಹಿಂದು ಹುಡುಗಿ ಚೈತ್ರಾ, ಮೂರು ವರ್ಷಗಳಿಂದ ಪ್ರೀತಿಸಿ ಇದೀಗ ಮದುವೆಯಾಗಿದ್ದಾರೆ. ಇನ್ನು ಮುಸ್ಲಿಂ ಯುವಕನ ವಿರುದ್ಧ ಲವ್ ಜಿಹಾದ್ ಆರೋಪ ಹೊರಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು ಅವರ ಮದುವೆಗೆ ತಡೆಯೊಡ್ಡಿದ್ದರು. ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ ಯುವತಿ ಚೈತ್ರಾ ನಾವು ಇಬ್ಬರು ಇಷ್ಟಪಟ್ಟೆ ಮದುವೆಗೆ ಮುಂದಾಗಿದ್ದೇವೆ. ಚೆನ್ನಾಗಿರ್ತೀವಿ, ಕೇಳೋಕೆ ಅವರ್ಯಾರು.? ಎಂದು ಭಜರಂಗದಳ ಕಾರ್ಯಕರ್ತರ ವಿರುದ್ಧ ಚೈತ್ರಾ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಭಜರಂಗದಳ ಕಾರ್ಯಕರ್ತರು ನನ್ನನ್ನು ಎಳೆದಾಡಿ, ಕೆಟ್ಟ ಕೆಟ್ಟದಾಗಿ ಬೈದು, ನನ್ನ ಗಂಡನಿಗೆ ಹಲ್ಲೆ ಮಾಡಿದ್ದಾರೆ. ಹಿಂದೂ ಹುಡುಗಿ ಬೇಕಾ..? ಎಸ್ಸಿ ಹುಡುಗಿ ಬೇಕಾ ಅಂತ ಪತಿಯನ್ನು ಥಳಿಸಿದ್ದಾರೆ. ಚಿಕ್ಕಮಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಮ್ಮ ಮೇಲೆ ಹಲ್ಲೆ ನಡೆದಿದೆ. ಆ ದಿನ ಭಜರಂಗದಳದವರು ಏನಾದರೂ ಮಾಡುತ್ತಾರೆ ಅಂತಾ ನನ್ನನ್ನು ಮನೆಗೆ ಕಳುಹಿಸಲಿಲ್ಲ. ಮನೆಗೆ ಕಳುಹಿಸದೇ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ. ಆರೋಪಿಗಳಿಗೆ ಬೇಲ್ ಕೊಟ್ಟು ಕಳುಹಿಸಿದ್ದಾರೆ. ನಮ್ಮ ಮೇಲೆ ಹಲ್ಲೆ ಮಾಡಿ, ಕೆಟ್ಟದಾಗಿ ಬೈದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಪೋಲಿಸ್ ಇಲಾಖೆ ವಿರುದ್ಧ ಜಾಫರ್ ಮತ್ತು ಚೈತ್ರಾ ಅಸಮಾಧಾನ ಹೊರಹಾಕಿದ್ದಾರೆ.
ಪ್ರೇಮಿಗಳು ಮದುವೆಗೆ ಅಡ್ಡಿಪಡಿಸಿದ ಸ್ಥಳದಲ್ಲೇ, ಚಿಕ್ಕಮಗಳೂರು ಸಬ್ ರಿಜಿಸ್ಟ್ರಾರ್ ಕಚೇರಿ ಎದುರಲ್ಲೇ ಹಾರ ಬದಲಿಸಿಕೊಂಡು ಮದುವೆಯಾಗಿದ್ದಾರೆ. ನವ ಜೋಡಿಗೆ ಮುಸ್ಲಿಂ-ದಲಿತ ಸಂಘಟನೆಗಳ ಸಾಥ್ ನೀಡಿವೆ.