ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14 ನೇ ಆರೋಪಿ (A14) ಪ್ರದೂಷ್ ಎಸ್. ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ (Approver) ಪರಿಗಣಿಸಿರುವ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ (A2) ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ತೀರ್ಪನ್ನು ಸೆಪ್ಟೆಂಬರ್ 7 ಕ್ಕೆ ಪ್ರಕಟಿಸುವುದಾಗಿ ಹೈಕೋರ್ಟ್ ತಿಳಿಸಿದ್ದು, ಅಲ್ಲಿಯವರೆಗೆ ವಿಚಾರಣಾ ನ್ಯಾಯಾಲಯದಲ್ಲಿ ಪ್ರದೂಷ್ ಸಾಕ್ಷ್ಯ ದಾಖಲಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದೂಡಿದೆ.
ಈ ಹಿಂದೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿ ಬುಧವಾರವೇ ತೀರ್ಪು ನೀಡುವುದಾಗಿ ತಿಳಿಸಿತ್ತು. ಆದರೆ, ಬುಧವಾರ ಹೆಚ್ಚಿನ ಸಂಖ್ಯೆಯ ಅರ್ಜಿಗಳು ವಿಚಾರಣೆಗೆ ನಿಗದಿಯಾಗಿದ್ದರಿಂದ, ದಿನದ ಕಲಾಪದ ಕೊನೆಯಲ್ಲಿ ಆದೇಶ ನೀಡುವುದಾಗಿ ಕೋರ್ಟ್ ತಿಳಿಸಿತ್ತು. ರಾತ್ರಿ 8 ಗಂಟೆಯಾದರೂ ಕಲಾಪ ಮುಗಿಯದಿದ್ದಾಗ, ಇಷ್ಟೊಂದು ತಡವಾಗಿ ಆದೇಶದ ಉಕ್ತಲೇಖನ (Dictation) ನೀಡಲು ಸಾಧ್ಯವೇ ಎಂದು ನ್ಯಾಯಪೀಠವು ದರ್ಶನ್ ಪರ ವಕೀಲರನ್ನು ವಿಚಾರಿಸಿತು. ವಕೀಲರು ಮತ್ತೊಂದು ದಿನಕ್ಕೆ ಮುಂದೂಡುವಂತೆ ಕೋರಿದ ಹಿನ್ನೆಲೆಯಲ್ಲಿ, ನ್ಯಾಯಪೀಠವು ಸೆಪ್ಟೆಂಬರ್ 7 ಕ್ಕೆ ಆದೇಶವನ್ನು ಕಾಯ್ದಿರಿಸಿ, ರಾತ್ರಿ 8:07 ಕ್ಕೆ ಕಲಾಪವನ್ನು ಮುಕ್ತಾಯಗೊಳಿಸಿತು.


