ಬೆಂಗಳೂರು: ಇತ್ತೀಚೆಗೆ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಗೆ ಮೀಸಲಾತಿ ಪ್ರಕಟಗೊಂಡು ಹಲವಡೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಆಯ್ಕೆಯಾಗಿದ್ದಾರೆ. ಆದರೆ ಇದೀಗ ಹೈಕೋರ್ಟ್ ಈ ಮೀಸಲಾತಿ ರದ್ದುಗೊಳಿಸಿ ಹೊಸ ಮೀಸಲಾತಿ ಅಧಿಸೂಚನೆ ಪ್ರಕಟಿಸುವಂತೆ ಏಕಸದಸ್ಯ ಪೀಠ ನ್ಯಾಯಮೂರ್ತಿ ದೇವದಾಸ ಅವರು ಆದೇಶ ಮಾಡಿದ್ದಾರೆ.
ಮೀಸಲಾತಿ ಕುರಿತು ಹೈಕೋರ್ಟ್ ನಲ್ಲಿ ದೂರು ಸಲ್ಲಿಕೆಯಾಗಿತ್ತು ಎನ್ನಲಾಗಿದ್ದು, ನ್ಯಾಯಧೀಶರು ಸಮರ್ಪಕ ಪರಾಮರ್ಶಿಸಿ ಮೀಸಲಾತಿ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ 4 ವಾರಗಳಲ್ಲಿ ಹೊಸ ಮೀಸಲಾತಿ ಪ್ರಕಟಿಸಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಚುನಾವಣೆ ನಡೆಸಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಈ ಕುರಿತು ಈಗಾಗಲೇ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದವರ ನೇಮಕಾತಿ ಅಸಿಂಧು ಆಗಲಿದೆ. ನ್ಯಾಯಾಲಯದ ಆದೇಶದಂತೆ ಹಳೇ ಮೀಸಲಾತಿ ರದ್ದುಗೊಳಿಸಿ ಇದೀಗ ಪ್ರಸಕ್ತ ಹೊಸ ಮೀಸಲಾತಿ ಜಾರಿಗೊಳಿಸುವಂತೆ ಆದೇಶ ನೀಡಿದನ್ವಯ ಮತ್ತೊಮ್ಮೆ ಹೊಸ ಮೀಸಲಾತಿ ಅನ್ವಯ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ ಸರ್ಕಾರ ಆಕ್ಷೇಪಣೆ ಸಲ್ಲಿಸಲು 10 ದಿನಗಳ ಅವಕಾಶ ನೀಡಿದೆ. ರಾಜ್ಯದ 277 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟಿಸಲಾಗಿತ್ತು. ಹಲವಾರು ಕಡೆ ಚುನಾವಣೆಗಳು ನಡೆದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯೂ ನಡೆದಿದೆ. ಹಲವು ಜಿಲ್ಲೆಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಬಹುಮತ ಪಡೆದಿದ್ದರೂ ಮೀಸಲಾತಿ ಪ್ರಕಾರ ಅಧ್ಯಕ್ಷ ಹುದ್ದೆ ಬಿಜೆಪಿ ಪಾಲಾಗಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ನಲ್ಲಿ ಕಾನೂನು ಹೋರಾಟ ಆರಂಭಿಸಲಾಗಿತ್ತು.