ನವದೆಹಲಿ: ರಾಜ್ಯ ಸಚಿವ ಸಂಪುಟ ರಚನೆ ವಿಚಾರ ನಾಳೆ ಸಂಜೆ ನಿರ್ಧಾರವಾಗಲಿದ್ದು, ನಾಳೆ ಸಂಜೆಯೇ ವರಿಷ್ಠರು ಪಟ್ಟಿ ಪ್ರಕಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನವದೆಹಲಿಯಲ್ಲಿ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಿವಾಸದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ವರಿಷ್ಠರು ಪಟ್ಟಿ ಅಂತಿಮಗೊಳಿಸಿದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿ ಸಚಿವರ ಪ್ರಮಾಣ ವಚನದ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸುವುದಾಗಿ ಹೇಳಿದ್ದಾರೆ.
ಎಲ್ಲಾ ಪ್ರಶ್ನೆಗಳಿಗೂ ನಾಳೆ ಸಂಜೆ ಉತ್ತರ ಸಿಗಲಿದೆ ಎಂದು ಹೇಳಿರುವ ಬೊಮ್ಮಾಯಿ, ಡಿಸಿಎಂ ಸ್ಥಾನಗಳು ಎಷ್ಟು ಎಂಬುದು ಕೂಡಾ ನಾಳೆಯೇ ತಿಳಿಯಲಿದೆ ಎಂದಿದ್ದಾರೆ. ಎರಡು-ಮೂರು ಪಟ್ಟಿಯನ್ನು ವರಿಷ್ಠರಿಗೆ ನೀಡಿದ್ದು, ಹೈಕಮಾಂಡ್ ಉತ್ತಮ ತೀರ್ಮಾನ ಮಾಡುವ ವಿಶ್ವಾಸವಿದೆ ಎಂದು ಕೂಡಾ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನವದೆಹಲಿಯಲ್ಲಿ ಇಂದು ಜೆ.ಪಿ. ನಡ್ಡಾ ನಿವಾಸದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು.