ಮಲ್ಪೆ: ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಹೆಬ್ರಿ ಜಡ್ ಕಟ್ಟು ಎಂಬಲ್ಲಿ ರಸ್ತೆ ಪಕ್ಕದಲ್ಲಿ ಭಾರೀ ಗಾತ್ರದ ಹೊಂಡ ಇದ್ದು ಅಪಘಾತಕ್ಕೆ ಆಹ್ವಾನ ನೀಡಿದಂತಿದೆ. ಈ ಕಳಪೆ ಕಾಮಗಾರಿ ಬಗ್ಗೆ ಹೆಬ್ರಿಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಶ್ರೀಕಾಂತ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಹೆಬ್ರಿಯಿಂದ ಆಗುಂಬೆಯ ಘಾಟಿ ತನಕ ಡಾಂಬರೀಕರಣ ನಡೆದಿದೆ. ಆದರೆ ರಸ್ತೆ ಬದಿಯ ಚರಂಡಿಗಳ ಕಾಮಗಾರಿ ಸರಿಯಾಗಿ ಮಾಡದೆ ವಾಹನ ಸವಾರರು ತಮ್ಮ ಜೀವವನ್ನು ಕೈಯಲ್ಲಿಟ್ಟುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಇದೆ ಹೆಬ್ರಿ ಜಡ್ ಕಟ್ಟು ಎಂಬಲ್ಲಿ ರಸ್ತೆ ಬದಿಯಲ್ಲಿ ಬೃಹತ್ ಆಕಾರದ 2 ಮರಗಳಿವೆ. ಇದನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ಹಾಗಾಗಿ ಇಲ್ಲಿ ರಸ್ತೆಗೆ ತಾಗಿ ಬೃಹತ್ ಆಕಾರದ ಚರಂಡಿ ಹೊಂಡ ಇದೆ. ಎಲ್ಲಿಯಾದರೂ ವಾಹನ ಸವಾರರು ಸ್ವಲ್ಪ ಆಯ ತಪ್ಪಿದರೆ ಸಾವು ಕಟ್ಟಿಟ್ಟ ಬುತ್ತಿ ಎನ್ನುವುದು ಅವರ ಆಕ್ರೋಶ.
ಆದುದರಿಂದ ಸಂಬಂಧಪಟ್ಟ ಇಲಾಖೆ ಇಲ್ಲಿ ತಡೆಗೋಡೆ ನಿರ್ಮಿಸಬೇಕು.ಇಲ್ಲದಿದ್ದರೆ ಮುಂದೆ ಆಗುವ ಭಾರೀ ಅನಾಹುತಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ ಎಂದು ಶ್ರೀಕಾಂತ ಪೂಜಾರಿ ಹಾಗೂ ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.