ಮಂಗಳೂರು: ಬಂಗಾಳ ಉಪಸಾಗರದ ಒರಿಸ್ಸಾ ಮತ್ತು ಆಂಧ್ರಪ್ರದೇಶದ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಕರ್ನಾಟಕ ಮತ್ತು ಕೇರಳ ಕರಾವಳಿ ತೀರದಲ್ಲಿ ಟ್ರಫ್ ಉಂಟಾಗಿದೆ. ಇದರಿಂದಾಗಿ ಕರಾವಳಿಯಾದ್ಯಂತ ರವಿವಾರ ಬಿರುಸಿನಿಂದ ಕೂಡಿದ ಮಳೆಯಾಗಿದೆ.
ಮಂಗಳೂರು ನಗರದಲ್ಲಿ ಬೆಳಗ್ಗೆಯಿಂದಲೇ ಬಿಟ್ಟು ಬಿಟ್ಟು ಮಳೆಯಾಗಿದ್ದು, ಮಧ್ಯಾಹ್ನ ಮತ್ತು ರಾತ್ರಿ ವೇಳೆ ಮಳೆ ಬಿರುಸು ಪಡೆದಿತ್ತು.ಹಾಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಯಾದ ವರದಿಯಾಗಿದೆ.
ಉಡುಪಿ ಜಿಲ್ಲೆಯಲ್ಲಿಯೂ ದಿನಪೂರ್ತಿ ಮಳೆಯಾಗಿದೆ. ಜಿಲ್ಲೆಯ ವಿವಿಧ ಕಡೆ ಬೆಳಗ್ಗೆಯಿಂದ ಆಗಾಗ್ಗೆ ಮಳೆ ಸುರಿದಿದೆ. ಜಿಲ್ಲೆಯಲ್ಲಿ ದಿನವಿಡೀ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾಗೂ ವಾರಾಂತ್ಯವಾಗಿದ್ದರೂ ರವಿವಾರ ಮಲ್ಪೆ ಬೀಚ್ನಲ್ಲಿ ವಿಹಾರ ಬರುವ ಪ್ರವಾಸಿಗರು ಸೇರಿದಂತೆ ಜನರ ಸಂಖ್ಯೆ ವಿರಳವಾಗಿತ್ತು.
ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ ಆ. 30 ಮತ್ತು 31ರಂದು ರಾಜ್ಯ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಆ.30ರಂದು “ಆರೆಂಜ್ ಅಲರ್ಟ್’ ಘೋಷಿಸಲಾಗಿದ್ದು, ಆ. 31ರಂದು “ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಐಎಂಡಿ ಮಾಹಿತಿಯಂತೆ ರವಿವಾರ ಪಣಂಬೂರಿನಲ್ಲಿ 26.5 ಡಿ.ಸೆ. ಗರಿಷ್ಠ ಮತ್ತು 22 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.