ಅರಸಿನಮಕ್ಕಿ: ಬೆಳ್ತಂಗಡಿ ತಾಲೂಕಿನ ಹತ್ಯಡ್ಕದ ಕಾಪಿನಡ್ಕ ನಿವಾಸಿ ಮತ್ತು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನ ನಿವೃತ್ತ ಉದ್ಯೋಗಿ ಗೋಪಾಲ ಶೆಟ್ಟಿಗಾರ್ ಇಂದು ಹೃದಯಾಘಾತದಿಂದ ನಿಧನರಾದರು.
ಅರಸಿನಮಕ್ಕಿಯ ಕಾಪು ಉಪ್ಪರಡ್ಕ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ಮೂಕಾಂಬಿಕ ಗಿರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ, ಕಾಲಭೈರವೇಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂದಾಳುವಾಗಿ ಅನನ್ಯ ಸೇವೆ ಸಲ್ಲಿಸಿದ್ದರು.
ಕಳೆದ ಹಲವಾರು ವರ್ಷಗಳಿಂದ ಕಾಪು ಉಪ್ಪರಡ್ಕ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ದೈವಸ್ಥಾನದ ಗುಡಿಗಳ ಪುನರ್ ನಿರ್ಮಾಣ ಸೇರಿದಂತೆ ದೈವಸ್ಥಾನದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ್ದರು.
ಪದ್ಮಶಾಲಿ ಸಮಾಜದ ಮುಖಂಡರಾಗಿದ್ದ ಶ್ರೀಯುತರು ಸಮಾಜದ ಅಭಿವೃದ್ದಿಗೆ ಕೊಡುಗೆ ನೀಡಿದ್ದರು, ಹತ್ಯಡ್ಕ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯ ಗುಮಾಸ್ತರಾಗಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಪತ್ನಿ, ಓರ್ವ ಮಗ ಮತ್ತು ಓರ್ವ ಮಗಳನ್ನು ಅಗಲಿದ್ದಾರೆ.
ಮೃತ ಗೋಪಾಲ ಶೆಟ್ಟಿಗಾರ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಹತ್ಯಡ್ಕ ಸಹಕಾರಿ ಬ್ಯಾಂಕ್ ನ ಆಡಳಿತ ವರ್ಗ ಮತ್ತು ಸಿಬ್ಬಂದಿ ವರ್ಗ ಪ್ರಾರ್ಥಿಸಿದ್ದಾರೆ.